About Sharanas

English version is under preparation!





ಬಸವಣ್ಣ



ಒಂದು ಲೇಖನದಲ್ಲಿ ಬಸವಣ್ಣನವರ ಪರಿಚಯ ಮಾಡಿಕೊಡುವುದು ಎಂದರೆ ಸೂರ್ಯನ ಇಡೀ ಪ್ರಕಾಶವನ್ನು  ಕೈಲ್ಲಿ ಹಿಡಿದು ತಂದು ತೋರಿಸುತ್ತೇನೆ ಎಂದಂತೆ. ಅವರು ಮಾಡಿದ ಕೆಲಸ, ಬಾಳಿದ ರೀತಿ, ಅವರ ವ್ಯಕ್ತಿತ್ವದ ಎತ್ತರ ಅಗಾಧವಾದದ್ದು. ಇಂದಿನ ದಿನಗಳಲ್ಲಿ ಅದನ್ನು ಊಹಿಸುವುದೂ ಕೂಡ ಅಸಾಧ್ಯವೆಂದೇ ತೋರುತ್ತದೆ. 
ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ೧೧೩೧ ರಲ್ಲಿ ಜನ್ಮ ತಳೆದರೆಂದು ತಿಳಿದು ಬರುತ್ತದೆ. ಅವರ ತಂದೆ ಮಾದರಸ ಮತ್ತು ತಾಯಿ ಮಾದಲಾಂಬಿಕೆ. ಇವರು ಶೈವ ಬ್ರಾಹ್ಮಣರಾಗಿದ್ದರು. ಬಸವಣ್ಣನವರು ಚಿಕ್ಕಂದಿನಿಂದಲೇ ಅಸಾಮಾನ್ಯ ಬುದ್ಧಿವಂತರು ಮತ್ತು ಸೂಕ್ಷ್ಮ ಮತಿಗಳಾಗಿದ್ದರು. ಸಮಾಜದಲ್ಲಿಯ ಮೇಲು ಕೀಳುಗಳು ಅವರಿಗೆ ಸರಿ ಬರುತ್ತಿರಲಿಲ್ಲ. ಉಪನಯನವು ಮೇಲು ಕೀಳೆಂಬ ಭಾವನೆಗೆ ಸಾಧನವಾಗುತ್ತದೆ  ಎಂದರಿತು ಅದನ್ನು ಅವರು ವಿರೋಧಿಸಿದರು.
ಸಂಗಮ ಕ್ಷೇತ್ರವು ಅಂದು ವಿದ್ಯಾ ಕೇಂದ್ರವಾಗಿತ್ತು. ಬಸವಣ್ಣನವರು ಅಲ್ಲಿ ಈಶಾನ್ಯಮೂರ್ತಿಗಳ ಶಿಷ್ಯತ್ವವನ್ನು ಗ್ರಹಿಸಿದರು. ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಮಾಡಿದರು. ಬಸವಣ್ಣನವರ ಸೋದರ ಮಾವ ಬಲದೇವರು ಮಂಗಳವೇಡೆಯಲ್ಲಿ ಚಾಲುಕ್ಯ ಅರಸನ  ದಂಡಾಧೀಶರಾಗಿದ್ದರು. ಅವರು ತಮ್ಮ ಮಗಳು ಗಂಗಾಂಬಿಕೆಯನ್ನು ಬಸವಣ್ಣನಿಗೆ ಕೊಟ್ಟು ಮದುವೆ ಮಾಡಬೇಕೆಂದುಕೊಂಡರು. ಆದರೆ ಬಸವಣ್ಣನವರು ಸಂಸಾರದ ಬಂಧನದಲ್ಲಿ ಸಿಕ್ಕಬಾರದೆಂದುಕೊಂಡಿದ್ದರು. ಗುರುಗಳು ಅವರಿಗೆ ತಿಳಿ ಹೇಳಿದರು. ಕೊನೆಗೆ ಅವರು ಗಂಗಾಂಬಿಕೆ ಮತ್ತು ಬಿಜ್ಜಳನ ಸಾಕು ತಂಗಿಯಾದ ನೀಲಲೋಚನೆಯನ್ನು ಮದುವೆಯಾದರು. ಬಿಜ್ಜಳನು ಚಾಲುಕ್ಯ ರಾಜ್ಯಾಡಳಿತವನ್ನು ತನ್ನ ಕೈವಶಮಾಡಿಕೊಂಡನು. ಮಂಗಳವೇಡೆಯಿಂದ ಕಲ್ಯಾಣಕ್ಕೆ ರಾಜಧಾನಿಯನ್ನು ವರ್ಗಾಯಿಸಿದನು. ಬಸವಣ್ಣನವರು ಬಿಜ್ಜಳನ ಭಂಡಾರದ ಕರಣಿಕರಾದರು. ಬಲದೇವರು ದೈವಾಧೀನರಾದ ಮೇಲೆ ಅವರು ಮಂತ್ರಿಗಳಾದರು. ಅವರು ಅನೇಕ, ಸಾಮಾನ್ಯ ಜನಪರ ಕೆಲಸಗಳನ್ನು ಮಾಡಿದರು. ಅವರ ಕೀರ್ತಿಯಿಂದ ಮತ್ಸರಗೊಂಡು ಸನಾತನಿಗಳು ಅವರ ವಿರುದ್ಧವಾಗಿ ಬಿಜ್ಜಳನಿಗೆ ದೂರುಕೊಟ್ಟರು. ಪರಿಣಾಮವಾಗಿ ಬಸವಣ್ಣನವರು ಕಲ್ಯಾಣ ತೊರೆದು ಕೂಡಲ ಸಂಗಮಕ್ಕೆ ಹೋದರು. ಬಿಜ್ಜಳನು ಸನಾತನಿಗಳ ಒತ್ತಡಕ್ಕೆ ಮಣಿದು ಹರಳಯ್ಯ ಮತ್ತು ಮಧುವರಸರನ್ನು ಕೊಲ್ಲಿಸಿದನು. ಆನಂತರ ಬಿಜ್ಜಳನ ಕೊಲೆಯಾಯಿತು. ಶರಣರೇ ಕೊಲೆಮಾಡಿದರೆಂದು ವದಂತಿಯಾಯಿತು. ಬಸವಣ್ಣನವರು ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು. 
ಇದು ಅವರ ಜೀವನದ ಸ್ಥೂಲ ಪರಿಚಯ. 
ಅವರ ಇತರಗಳು ಸಾಧನೆಗಳು ಅಪಾರವಾದವುಗಳು.  ಅಂದಿನ ಸಮಾಜದಲ್ಲಿ ವರ್ಣಪದ್ಧತಿಯ ಕಾರಣದಿಂದ ಮೇಲು ಕೀಳೆಂಬ ಭಾವದಿಂದ ಅಸಮಾನತೆಯಿತ್ತು. ಸ್ತ್ರಿಯರನ್ನು ಪುರುಷರ ಸಮಾನರೆಂದು ಒಪ್ಪುತ್ತಿರಲಿಲ್ಲ.ಇನ್ನು ಅಸ್ಪೃಶ್ಯರ ಬಾಳಂತೂ ನರಕವಾಗಿತ್ತು. “ದಯವೇ ಧರ್ಮದ ಮೂಲವೆಂದು” ಹೇಳಿದ ಅವರು ಇದನ್ನೆಲ್ಲ ಹೇಗೆ ಸಹಿಸಿಯಾರು? ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಅವರು ಎಲ್ಲರನ್ನು ಸಮಾನವಾಗಿ ಕಂಡರು.  ಎಲ್ಲರೂ ಇವರನ್ನು “ಇವ ನಮ್ಮವ, ಇವ ನಮ್ಮವ” ಎನ್ನುವಂತೆ
ಬಾಳಿದರು. ಎಲ್ಲರಿಗೂ ಅಣ್ಣರಾದರು. ಅಸ್ಪೃಶ್ಯರೂ, ಸ್ತ್ರಿಯರು  ಕೂಡ ಅನುಭವ ಮಂಟಪಕ್ಕೆ ಬಂದು ಅನುಭಾವದ ಚರ್ಚೆಯಲ್ಲಿ ಭಾಗವಹಿಸಿ ವಚನಗಳನ್ನು ರಚಿಸುವ ಎತ್ತರಕ್ಕೆ ಮುಟ್ಟಲು ಬಸವಣ್ಣನವರು ಕಾರಣರಾದರು. 
ಕಾಯಕವೇ ಕೈಲಾಸ ವೆಂಬ ಉದಾತ್ತ ವಿಚಾರವನ್ನು ಪರಿಚಯಿಸಿದರು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ, ಕಾಯಕದ ಬಗ್ಗೆ  ಮಾಡುವವನ ಮನದಲ್ಲಿಯ ಭಾವ ಮುಖ್ಯವೆಂದು ಹೇಳಿದರು. ಚಪ್ಪಲಿ ಹೊಲಿಯುವುದು, ಬಟ್ಟೆ ಒಗೆಯುವುದು, ಅಕ್ಕಿ ಆಯುವುದು, ದೋಣಿ ನಡೆಸುವುದು, ಬಟ್ಟೆ ನೇಯುವುದು, ಹಗ್ಗ ಹೊಸೆಯುವುದು, ಸೌದೆ ಕಡಿದು ಮಾರುವುದು ಇತ್ಯಾದಿಗಳು ಮೊದಲು ಕೀಳೆಂದು ಪರಿಗಣಿಸುತ್ತಿದ್ದ ಕೆಲಸಗಳು ಅವರಿಂದ  ಕಾಯಕವೆಂಬ ಹೆಸರಿನಿಂದ ಉದಾತ್ತತೆಯನ್ನು ಪಡೆದವು.                   ಯಾರೂ ಕಾಯಕಮಾಡದೆ ಇರುವಂತಿಲ್ಲ ಎಂದು ಹೇಳಿ ಎಲ್ಲರೂ ತಮ್ಮ ತಮ್ಮ ಜಿವನೋಪಾಯ ಮಾಡಿಕೊಳ್ಳುವುದಲ್ಲದೆ ಸಮಾಜಕ್ಕೂ ಸಹಾಯವಾಗುವಂತೆ ಕಾಯಕ ಮತ್ತು ದಾಸೋಹಕ್ಕೆ   ಮಹತ್ವ ಕೊಟ್ಟರು. ತಾನು ಗಳಿಸಿದುದರಲ್ಲಿ ತನಗೆ ಬೇಕಾದಷ್ಟನ್ನು ಮಾತ್ರವಿಟ್ಟುಕೊಂಡು ಉಳಿದುದನ್ನು ಜಂಗಮ ಸೇವೆಯಲ್ಲಿ ತೊಡಗಿಸಬೇಕೆಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು. 
“ತಾನುಂಬ ಊಟವನ್ನು ತಾ ಮಾಡಬೇಕಲ್ಲದೆ ಬೇರೆಯವರ ಕೈಯಲ್ಲಿ ಮಾಡಿಸಬಹುದೆ?” ಎಂದು ಕೇಳಿ ತಮ್ಮ ಪೂಜೆಯನ್ನು ತಾವೇ ಮಾಡಬೇಕಾದದ್ದು ಸರಿ ಎಂದು ಹೇಳಿದರು. ದೇವಾಲಯಗಳಲ್ಲಿ ಪೂಜಾರಿಗಳ ಮೂಲಕ ಮಾಡುವ ಪೂಜೆಯ ನಿರರ್ಥಕತೆಯನ್ನು ತೋರಿಸಿಕೊಟ್ಟರು. ತಮ್ಮ ದೇಹವನ್ನು ದೇಗುಲವನ್ನಾಗಿ ಮಾಡುವ ಮೂಲಕ  ದೇವರನ್ನು ದೇವಾಲಯದಿಂದ ತನ್ನ ಒಳಗೇ ತಂದರು. ಸ್ಥಾವರ ಪೂಜೆಯನ್ನು ಬಿಟ್ಟು ಜಂಗಮ ತತ್ವವನ್ನು ಪೂಜಿಸುವಂತೆ ಮಾಡಿದರು.
“ಅರಗು ತಿಂದು ಕರಗುವ ದೈವ” “ಮಡಕೆ ದೈವ, ಮೊರ ದೈವ” ಇತ್ಯಾದಿ ವಚನಗಳ ಮೂಲಕ  ಎಲ್ಲವನ್ನೂ ದೇವರೆಂದು ಪೂಜಿಸುವವರು ತಮ್ಮನ್ನೇ ಪ್ರಶ್ನಿಸಿಕೊಳ್ಳುವವಂತೆ ಮಾಡಿದರು. “ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲಿ ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣ” ಎಂದರು. ಒಂದೆರಡುಕಡೆ ಯಲ್ಲ, ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಹೇಳಿ ಸಾಮಾನ್ಯ ಜನರು  ಅದನ್ನು ತಿಳಿದುಕೊಳ್ಳುವಂತೆ ಅನೇಕ  ದೃಷ್ಟಾಂತಗಳನ್ನು ಕೊಟ್ಟರು. 
ನೀರಕಂಡಲ್ಲಿ ಮುಳುಗುವ, ಮರನ ಕಂಡಲ್ಲಿ ಸುತ್ತುವ ಜನರ ಮೌಢ್ಯವನ್ನು ಪ್ರಶ್ನಿಸಿ ಅದರ  ನಿರರ್ಥಕತೆಯನ್ನು ಮನದಟ್ಟು ಮಾಡಿಸಿದರು. ಜನರಲ್ಲಿ ಅರಿವನ್ನುಂಟುಮಾಡಿದರು. ಯಜ್ಞ ಯಾಗಗಳಲ್ಲಿ ಪ್ರಾಣಿಬಲಿಕೊಡುವುದನ್ನು ಒಪ್ಪಲಿಲ್ಲ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದರು. 
ಜಗತ್ತು ಮಾಯೆ ಅದರಿಂದ ದೂರ ಹೋಗಬೇಕೆಂಬ ಮಾತನ್ನು ಒಪ್ಪಲಿಲ್ಲ. ಈ ಸಂಸಾರದಲ್ಲಿದ್ದುಕೊಂಡೇ ಅಧ್ಯಾತ್ಮವನ್ನು ಸಾಧಿಸುವ ಬಗೆಯನ್ನು ತೋರಿಸಿಕೊಟ್ಟರು. ಧನ ಗಳಿಸುವುದು, ಗೃಹಸ್ಥ ಜೀವನ ನಡೆಸುವುದು ಯಾವುದೂ ತಪ್ಪಲ್ಲ. ಆದರೆ ಸನ್ಮಾರ್ಗದಲ್ಲಿ ನಡೆಯುವುದು ಮುಖ್ಯ, ಗಳಿಸಿದುದನ್ನು ತನಗೆ ಬೇಕಾದಷ್ಟನ್ನು ಇಟ್ಟುಕೊಂಡು ಸತ್ಪಾತ್ರರಿಗೆ ಕೊಡುವುದು ಎಂದು ಹೇಳಿದರು. ಕೆಟ್ಟ ಮಾರ್ಗಗಳಿಂದ ಗಳಿಸುವುದನ್ನು “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ” ಎಂದು ಹೇಳಿದರು. ಇಂದ್ರಿಯ ನಿಗ್ರಹ ಮಾಡುವುದು ವ್ಯ್ರರ್ಥ. ಅವುಗಳಿಗೆ  ಬೇಕಾದ ಸುಖವನ್ನು ನ್ಯಾಯವಾದ ರೀತಿಯಲ್ಲಿ ಕೊಟ್ಟು ಆ ಸುಖದ ಮಿತಿಯನ್ನು ಮನವರಿಕೆ ಮಾಡಿಕೊಡುವುದು ಸರಿ ಎಂದು ತಿಳಿಸಿದರು.
ತಳವಿಲ್ಲದ ಮೌಢ್ಯದ ಕತ್ತಲೆಯಲ್ಲಿ ಮುಳುಗಿದ ಜನರ ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದರು ಬಸವಣ್ಣನವರು. ಅವರ ಜ್ಯೋತಿಯಿಂದ ಆಕರ್ಷಿತರಾಗಿ ನಾನಾಕಡೆಯಿಂದ ಜನರು ಕಲ್ಯಾಣಕ್ಕೆ ಬಂದರು. ನೂರಾರು ಜನರು ಒಂದೇ ಸಮಯದಲ್ಲಿ ಅಧ್ಯಾತ್ಮ ಪ್ರಗತಿಯನ್ನು ಸಾಧಿಸಲು ಕಾರಣರಾದರು. 





ಸಕಲೇಶ ಮಾದರಸ:



ಸಕಲೇಶ ಮಾದರಸನು ಮಲ್ಲಿಕಾರ್ಜುನನ ಮಗನು. ಮಲ್ಲಿಕಾರ್ಜುನನು ಕಲ್ಲುಕುರಿಕೆಯ ರಾಜನಾಗಿದ್ದನು. ಆದರೆ ವೈರಾಗ್ಯದಿಂದ ರಾಜ್ಯವನ್ನು ಮಾದರಸನಿಗೆ ವಹಿಸಿ ಕೊಟ್ಟು ತಾನು ಶ್ರೀಶೈಲಕ್ಕೆ ಹೊರಡುತ್ತಾನೆ. ಆನಂತರ ಕೆಲವು ವರ್ಷಗಳವರೆಗೆ ಮಾದರಸನು ರಾಜ್ಯವಾಳುತ್ತಾನೆ. ಶಿವಭಕ್ತನಾದ ಆತನು ಚೆನ್ನಾಗಿ ರಾಜ್ಯಭಾರ ನಿರ್ವಹಿಸಿ ಆತನು ಸಕಲೇಶ ಮಾದರಸ ಎಂಬ ಹೆಸರು ಪಡೆಯುತ್ತಾನೆ. ಆದರೆ ಕೆಲ ಸಮಯದ ನಂತರ ಆತನಿಗೂ ವೈರಾಗ್ಯ ಹುಟ್ಟುತ್ತದೆ. ಆತನೂ ಕೂಡ ರಾಜ್ಯವನ್ನು ತ್ಯಜಿಸಿ ಶ್ರೀಶೈಲದ ಕೆಡೆಗೆ ಹೊರಡುತ್ತಾನೆ. ದಾರಿಯಲ್ಲಿ “ಅಂಬೆ” ಎಂಬ ಊರಿನಲ್ಲಿ ಉಳಿದುಕೊಂಡಾಗ ಅಲ್ಲಿಯ ಜನರು ಈತನ ಪೂಜಾವಿಧಿಯಿಂದ ಆಕರ್ಷಿತರಾಗುತ್ತಾರೆ. ಮಾದರಸನು ಅತ್ಯಂತ ವೈಭವದಿಂದ ಪೂಜೆ ಮಾಡುತ್ತಿರುತ್ತಾನೆ. ಅನೇಕ ರೀತಿಯ ಪುಷ್ಪ ಪತ್ರೆಗಳಿಂದ, ಧೂಪ ದೀಪಗಳಿಂದ ಆತನ ಪೂಜೆ ಸಂಪನ್ನವಾಗುತ್ತಿತ್ತು. ಇದರಿಂದ ಜನರು ಪೂಜೆ ಮಾಡಲು ಆತನನ್ನು ತಮ್ಮ ತಮ್ಮ ಮನೆಗಳಿಗೆ ಕರೆಯ ತೊಡಗುತ್ತಾರೆ. ಆತನು ಪೂಜೆಯ ಸಾಮಗ್ರಿಗಳಿಗಾಗಿ ೧೨ ವರಹಗಳನ್ನು ತೆಗೆದುಕೊಳ್ಳುತ್ತಿರುತ್ತಾನೆ. ೧೨ ವರಹಗಳನ್ನು ಕೊಡದವರ ಮನೆಗೆ ಆತನು ಪಜೆ ಮಾಡಲು ಹೋಗುತ್ತಿರಲಿಲ್ಲ. ಹೀಗಿರುವಾಗ ಒಮ್ಮೆ ಕಡು ಬಡವನಾದ ಮಾದಯ್ಯನೆಂಬುವನಿಗೆ ತನ್ನ ಮನೆಯಲ್ಲಿ ಪೂಜೆ ಮಾಡಿಸಬೇಕೆಂಬ ಆಸೆ ಉಂಟಾಗುತ್ತದೆ. ಆದರೆ ಬಡತನದಿಂದ ಹಾಗೆ ಮಾಡಲಾಗದಿದ್ದುದಕ್ಕೆ ಆತ ಬಹಳ ದುಃಖಪಟ್ಟುಕೊಳ್ಳುತ್ತಾನೆ. ಇದರ ಅರಿವಿದ್ದ ಆತನ ಮಗಳು ಆತನ ದುಃಖವನ್ನು ನೋಡಲಾರದೆ ಒಂದು ಉಪಾಯವನ್ನು ಮಾಡುತ್ತಾಳೆ. ಆಕೆ ತನ್ನನ್ನು ಒತ್ತೆ ಇಟ್ಟು ಹಣವನ್ನು ಪಡೆದು ಪೂಜೆ ನೆರವೇರಿಸು ಎಂದು ತನ್ನ ತಂದೆಗೆ ಹೇಳುತ್ತಾಳೆ. ಪೂಜೆಯ ಮೋಹಕ್ಕೆ ಒಳಗಾದ ಆತನು ವಿವೇಕವನ್ನು ಕಳೆದುಕೊಂಡಿರುತ್ತಾನೆ. ಆತನು ಅವಳು ಹೇಳಿದಂತೆಯೇ ಮಾಡುತ್ತಾನೆ. ಮಾದರಸನು ಮಾದಯ್ಯನ ಮನೆಗೆ ಪೂಜೆಗೆ ಬರುತ್ತಾನೆ. ಕಡು ಬಡವನಾದ ಆತನು ಹಣವೆಲ್ಲಿಂದ ತಂದನು ಎಂದು ಕೇಳಿದಾಗ ಮಾದರಸನಿಗೆ ಸತ್ಯ ತಿಳಿದು ಬಂರುತ್ತದೆ. ಆದರೂ ಪೂಜೆ ಕೈಗೊಳ್ಳುತ್ತಾನೆ. ಆದರೆ ಆತನಿಗೆ ತನ್ನ ಇಷ್ಟ ಲಿಂಗದಲ್ಲಿ ಮಾದಯ್ಯನ ಮಗಳ ದೀನವಾದ ಮುಖ ಗೋಚರಿಸುತ್ತದೆ, ಪೂಜೆಯಲ್ಲಿ ಮನ ನಿಲ್ಲುವುದಿಲ್ಲ ಮತ್ತು ತಾನು ಮಾಡುತ್ತಿರುವ ತಪ್ಪಿನ ಅರಿವಾಗುತ್ತದೆ. “ಭಕ್ತನ ಮಕ್ಕಳನ್ನು ಮಾರಿಸುವಂತಾಯಿತೇ ನನ್ನ ಪೂಜೆ” ಎಂದು ಪಶ್ಚಾತಾಪಪಡುತ್ತಾನೆ. ಮಾದಯ್ಯನಲ್ಲಿ ಕ್ಷಮೆ ಕೇಳಿ ಆತನ ಮಗಳನ್ನು ಬಿಡಿಸಿ ಕೊಟ್ಟು ಆ ಊರನ್ನು ತೊರೆದು ಒಬ್ಬನೇ ಶ್ರೀಶೈಲದ ಕಡೆಗೆ ಹೊರಡುತ್ತಾನೆ. ಅಲ್ಲಿ ಹೋಗಿ ತನ್ನ ತಂದೆ ಮಲ್ಲಿಕಾರ್ಜುನನ್ನು ಕಾಣುತ್ತಾನೆ. ಮಲ್ಲಿಕಾರ್ಜುನನು ಶಿವಯೋಗಿ ಮಲ್ಲಯ್ಯನಾಗಿರುತ್ತನೆ. ಮಲ್ಲಯ್ಯನ ಆಶೀರ್ವಾದ ಪಡೆದು ಮಾದರಸ ತಪಶ್ಚರ್ಯದಲ್ಲಿ ತೊಡಗುತ್ತಾನೆ. ಮಾದರಸನನ್ನು ನೋಡಿದ ಕೂಡಲೆ ಮಲ್ಲಯ್ಯನಿಗೆ ಆತನ ಅಹಂಕಾರ ಇನ್ನೂ ಕಳೆಯದೆ ಇರುವುದು ತಿಳಿಯುತ್ತದೆ. ಒಮ್ಮೆ ಆತನು ಕುರುಬನ ವೇಷದಿಂದ ಬಂದು ತಪಸ್ಸಿನಲ್ಲಿದ್ದ ಮಾದರಸನ ಮೈಮೇಲೆ ಗಿಡದ ಕೊಂಬೆಗಳನ್ನು ಎಸೆಯುತ್ತಾನೆ. ಇದರಿಂದ ಮಾದರಸನು ಅತ್ಯಂತ ಕೋಪಿಷ್ಠನಾಗಿ ಮಲ್ಲಯ್ಯನನ್ನು ಶಾಪದಿಂದ ಸುಟ್ಟು ಹಾಕಿಬಿಡುವೆನೆಂದು ಅಬ್ಬರಿಸುತ್ತಾನೆ. ಆಗ ಮಲ್ಲಯ್ಯನು ತನ್ನ ನಿಜರೂಪ ತೋರಿಸಿ, “ಕಾಡು ಸೊಪ್ಪನ್ನು ತಿಂದು ದೇಹವನ್ನು ದಂಡಿಸುವುದರಿಂದ ಯಾವ ಲಾಭವೂ ಇಲ್ಲ, ಶಿವಯೋಗವನ್ನು ಸಾಧಿಸಬೇಕು, ಅದಕ್ಕಾಗಿ ಕಲ್ಯಾಣಕ್ಕೆ ಹೋಗುವುದು ಸರಿಯಾದ ಮಾರ್ಗ” ವೆಂದು ತಿಳಿಸುತ್ತಾನೆ. “ಯಾವಾಗಲೂ ಇಂದ್ರಿಯಗಳನ್ನು ಕಾಯುತ್ತಿರುವುದು ಯೋಗವಲ್ಲ. ಅದು ದನ ಕಾಯುವ ಕೆಲಸ. ಇಂದ್ರಿಯ ನಿಗ್ರಹ ಸಹಜ ಸ್ಥಿತಿಯಾಗಿರಬೇಕು. ಅದು ಶಿವಯೋಗ. ಶಿವಯೋಗವು ಎಲ್ಲ ಯೋಗಗಳ ಸಮ್ಮಿಶ್ರಣವಲ್ಲ. ಅದು ಎಲ್ಲವನ್ನು ಅರಗಿಸಿಕೊಂಡು ಮೂಡಿ ನಿಂತ ಹೊಸ ವಿಕಾಸ ಮಾರ್ಗ. ಪೂರ್ಣದೃಷ್ಟಿಯ ಪೂರ್ಣ ಯೋಗ.” ಎಂದು ತಿಳಿಸುತ್ತಾನೆ. ಆಗ ಮಾದರಸನು ಕಲ್ಯಾಣಕ್ಕೆ ಬರುತ್ತಾನೆ. ಅಲ್ಲಿ ಅನುಭವ ಮಂಟಪದಲ್ಲಿ ಯಾವ ಆಡಂಬರಕ್ಕೂ ಎಡೆಯಿಲ್ಲದ ಅಂತರಗ ಶುದ್ಧಿಯನ್ನು ಕಂಡುಕೊಳ್ಳುತ್ತಾನೆ. ಶರಣರು ಆತನಿಗಾಗಿ ಒಂದು ಮಠವನ್ನು ಕಟ್ಟಿಸಿಕೊಡುತ್ತಾರೆ.. ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಬಸವಣ್ಣನವರು ಐಕ್ಯರಾದ ಮೇಲೆ ಸಂಚಾರವನ್ನು ಕೈಗೊಂಡು ಕೊನೆಗೆ ಶ್ರೀಶೈಲಕ್ಕೆ ಹೋಗುತ್ತಾನೆ.

ಆಧಾರ “ಕರ್ನಾಟಕ ಶರಣ ಕಥಾಮೃತ” -ಡಾ. ಎಚ್ ತಿಪ್ಪೆರುದ್ರಸ್ವಾಮಿ.






ಸಿದ್ಧರಾಮೇಶ್ವರ:



ಶರಣರಲ್ಲಿ ಸಮೂಹದಲ್ಲಿ ಹೊಳೆಯುವ ಇನ್ನೊಂದು ನಕ್ಷತ್ರ ಸಿದ್ಧರಾಮ. ಸಿದ್ಧರಾಮನ ಜೀವನದ ಸಾಧನೆಗಳನ್ನು ರಾಘವಾಂಕನು “ಸಿದ್ಧರಾಮ ಚಾರಿತ್ರ”ದಲ್ಲಿ ಚೆನ್ನಾಗಿ ಚಿತ್ರಿಸಿದ್ದಾನೆ. ಸಿದ್ಧರಾಮನ ಹುಟ್ಟಿದ ಊರು ಈಗಿನ ಸೊಲ್ಲಾಪುರ. ಹಿಂದೆ ಅದು ಸೊನ್ನಲಿಗೆ ಅಥವಾ ಸೊನ್ನಲಾಪುರವಾಗಿತ್ತು. ಸೊನ್ನಲಿಗೆಯ ಮುದ್ದೇಗೌಡ ಮತ್ತು ಸುಗ್ಗಲಾದೇವಿಯರ ಮಗ ಸಿದ್ಧರಾಮ. ರೇವಣಸಿದ್ಧೇಶ್ವರರು ಮಗುವಿಗೆ ಸಿದ್ಧರಾಮನೆಂದು ಹೆಸರಿಡಬೇಕೆಂದು ಹೇಳಿರುತ್ತಾರೆ. ಆದರೆ ಅದನ್ನು ಮರೆತು ಮುದ್ದೇಗೌಡನು ಮಗುವಿಗೆ ತಮ್ಮ ಮನೆಯ ದೇವರ ಹೆಸರು ಧೂಳಿಮಾಕಾಳನೆಂದು ನಾಮಕರಣ ಮಾಡುತ್ತಾರೆ. ಆದರೆ ಮಗು “ಸಿದ್ಧರಾಮಾ” ಎಂದಾಗ ಮಾತ್ರ ತಿರುಗಿ ನೋಡುತ್ತದೆ, ಇಲ್ಲದಿದ್ದರೆ ಮರುಳನಂತಿರುತ್ತದೆ. ಮಗುವಿನ ಜಡತ್ವವನ್ನು ನೋಡಿ ಮುದ್ದೇಗೌಡನು ಚಿಂತಿತನಾಗುತ್ತಾನೆ. ದನ ಕಾಯಲು ಹೋದರೆ ಇತರ ಮಕ್ಕಳೊಂದಿಗೆ ಬೆರೆತು ಚುರುಕಾಗಬಹುದು ಎಂದು ಭಾವಿಸಿ ದನ ಕಾಯಲು ಕಳಿಸುತ್ತಾನೆ. ಅಲ್ಲಿ ವಿಧವಿಧವಾದ ಹೂಗಳನ್ನು ಆರಿಸಿ ತಂದು ಶಿವಪೂಜೆ ಮಾಡಿ ಮನೆಯಿಂದ ತಂದ ಬುತ್ತಿಯನ್ನು ಎಡೆ ಮಾಡಿ ಪ್ರಸಾದವನ್ನು ಹಂಚಿ ತಿನ್ನುವುದು ಸಿದ್ಧರಾಮನ ದಿನಚರಿಯಾಗುತ್ತದೆ. ಹೀಗಿರುವಾಗ ಒಂದು ದಿನ ಸಿದ್ಧರಾಮನ ಮುಗ್ಧ ಭಕ್ತಿಗೆ ಮೆಚ್ಚಿ ಮಲ್ಲಿಕಾರ್ಜುನನು ತನ್ನ ನಿಜ ರೂಪದಲ್ಲಿ ಬಂದು ತನ್ನ ಹೆಸರು ಮಲ್ಲಿಕಾರ್ಜುನ, ತಾನು ಶ್ರೀಶೈಲದಲ್ಲಿರುವುದಾಗಿ ಹೇಳುತ್ತಾನೆ. ಆತನಿಗೆ ಮಾರು ಹೋಗಿ ಸಿದ್ಧರಾಮನು ಸಂಭ್ರಮದಿಂದ ನವಣೆಯ ಬೆಳಸನ್ನು ಆತನಿಗೆ ಕೊಟ್ಟು ಉಪಚರಿಸುತ್ತಾನೆ. ಆದರೆ ಅದರಿಂದ ಅತನ ಹಸಿವೆ ನೀಗುವುದಿಲ್ಲ, ಆತನು, ತನಗೆ ಆಹಾರ ಬೇಕೆಂದು ಕೇಳುತ್ತಾನೆ. ಆಗ ಸಿದ್ಧರಾಮ ತಾನು ಮನೆಗೆ ಹೋಗಿ ಆಹಾರ ತರುವೆನೆಂದೂ ತಾನು ಬರುವವರೆಗೂ ಆತನು ಅಲ್ಲಿಯೇ ಇರಬೇಕೆಂದು ಒಪ್ಪಿಸಿ ಓಡಿ ಓಡಿ ಮನೆಗೆ ಹೋಗುತ್ತಾನೆ. ತಾಯಿಗೆ ಬುತ್ತಿ ಮಾಡಿಕೊಡೆಂದು ಕೇಳುತ್ತಾನೆ. ಎಂದೂ ಏನೂ ಕೇಳದ ಮಗ ಇಂದು ಬುತ್ತಿ ಕೇಳಿದ್ದು ಆತನ ತಾಯಿಗೆ ಎಲ್ಲಿಲ್ಲದ ಆನಂದ ತರುತ್ತದೆ. ಆಕೆ ಸಡಗರದಿಂದ ಬುತ್ತಿಯನ್ನು ಮಾಡಿ ಕೊಡುತ್ತಾಳೆ. ಅದನ್ನು ತೆಗೆದುಕೊಂಡು ಒಂದೇ ಉಸುರಿಗೆ ಓಡೋಡಿ ನವಣೆಯ ಹೊಲಕ್ಕೆ ಹಿಂತಿರುಗುತ್ತಾನೆ ಸಿದ್ಧರಾಮ. ಆದರೆ ಪರ್ವತದ ಮಲ್ಲಯ್ಯ ಅಲ್ಲಿ ಇರುವುದಿಲ್ಲ. ನಿರಾಶನಾಗಿ ಸಿದ್ಧರಾಮ ಸುತ್ತಲೂ ಹುಡುಕುತ್ತಾನೆ. ಜಂಗಮನು ಎಲ್ಲಿಯೂ ಕಾಣದೆ ಹೋದಾಗ “ಮಲ್ಲಯ್ಯ ಮಲ್ಲಯ್ಯ” ಎಂದು ಅಳುತ್ತಾನೆ. ಅದೇ ದಾರಿಯಾಗಿ ಶ್ರೀಶೈಲಕ್ಕೆ ಹೋಗುತ್ತಿದ್ದ ಜನರ ಒಂದು ಗುಂಪು ಅಲ್ಲಿಗೆ ಬರುತ್ತದೆ. ಮಲ್ಲಯ್ಯನ ಹೆಸರು ಹೇಳುತ್ತ ಅಳುತ್ತಿದ್ದ ಸಿದ್ಧರಾಮನನ್ನು ನೋಡಿ ಕಾರಣ ಕೇಳುತ್ತಾರೆ ಆ ಗುಂಪಿನ ಜನರು. ತಾವೂ ಪರ್ವತದ ಮಲ್ಲಯ್ಯನ ಹತ್ತಿರವೇ ಹೋಗುತ್ತಿರುವುದಾಗಿ ಹೇಳಿ ಆತನನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಬಾಲಕ ಸಿದ್ಧರಾಮ ಮಲ್ಲಯ್ಯನನ್ನು ಕಾಣುವ ಅತೀವ ಆಸೆಯಿಂದ ಅವರೊಂದಿಗೆ ಹೋಗುತ್ತಾನೆ. ಆದರೆ ಅಲ್ಲಿ “ಮಲ್ಲಿಕಾರ್ಜುನ” ಎಂದು ಅವರು ತೋರಿದ ಲಿಂಗವನು ನೋಡಿ ಇನ್ನೊಮ್ಮೆ ನಿರಾಶೆಗೊಳ್ಳುತ್ತಾನೆ. ಅಲ್ಲಿ ಬೆಟ್ಟ ಮತ್ತು ಕಾಡಿನಲ್ಲಿ ಎಲ್ಲಡೆ ತಾನು ನೋಡಿದ ಮಲ್ಲಿಕಾರ್ಜುನನನ್ನು ಹುಡುಕಿ ಸೋತು ಕೊನೆಗೆ ರುದ್ರಗಮ್ಮರಿಯಲ್ಲಿ ಧುಮುಕಲು ಸಿದ್ಧನಾಗುತ್ತಾನೆ. ಆಗ ಮಲ್ಲಿಕಾರ್ಜುನನು ಪ್ರತ್ಯಕ್ಷನಾಗುತ್ತಾನೆ, ಅವನನ್ನು ಸಂತೈಸುತ್ತಾನೆ. ಈ ಇಡೀ ಸನ್ನಿವೇಶವನ್ನು ರಾಘವಾಂಕನು “ಸಿದ್ಧರಾಮ ಚಾರಿತ್ರ”ದಲ್ಲಿ ಸಾಂಕೇತಿಕವಾಗಿ ಚಿತ್ರಿಸಿದ್ದಾನೆ. ಇದು ಒಂದು ಪರಿವರ್ತನೆಯ ಘಟನೆಯ ಸಂಕೇತ. ಅಲ್ಲಿಂದ ಹಿಂತಿರುಗಿ ಬಂದು ಸಿದ್ಧರಾಮನು ಲೋಕ ಕಲ್ಯಾಣದ ಕೆಲಸದಲ್ಲಿ ನಿರತನಾಗುತ್ತಾನೆ. ಇದರಿಂದ ಸೊನ್ನಲಿಗೆ ಕೈಲಾಸದಂತಾಗುತ್ತದೆ. ಆತನ ಪ್ರಸಿದ್ಧಿ ಎಲ್ಲೆಡೆಗೂ ಪಸರಿಸುತ್ತದೆ. ಅನೇಕರು ಆತನ ಶಿಷ್ಯರಾಗುತ್ತಾರೆ. ತನ್ನ ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿ ಹೋದ ಸಿದ್ಧರಾಮನನ್ನು ಎಚ್ಚರಿಸಿ ಕರದೊಯ್ಯುವುದಕ್ಕಾಗಿ ಅಲ್ಲಮಪ್ರಭು ಅಲ್ಲಿ ಬರುತ್ತಾರೆ.

ಸಿದ್ಧರಾಮನ ಶಿಷ್ಯರು ಕೆರೆ ಕಟ್ಟಿಸುವ ಮತ್ತು ಅರವಟ್ಟಿಗೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಅಲ್ಲಿಗೆ ಬಂದು ಅಲ್ಲಮರು ಸಿದ್ಧರಾಮನ ಕೆಲಸದ ಬಗ್ಗೆ ಹಗುರವಾಗಿ ಮಾತನಾಡುತ್ತಾನೆ. ಶಿಷ್ಯರು ಕೋಪಗೊಳ್ಳುತ್ತಾರೆ. ಸಿದ್ಧರಾಮನಲ್ಲಿ ದೂರುತ್ತಾರೆ. ಸಿದ್ಧರಾಮನು ಕೋಪದಿಂದ ಅಲ್ಲಮನಲ್ಲಿಗೆ ಬರುತ್ತಾನೆ ಮತ್ತು ಅಲ್ಲಮನ ನಿಲುವನ್ನು ಕಂಡು ಶಾಂತನಾಗಿ ಪಶ್ಚಾತಾಪದಿಂದ ಅಲ್ಲಮನಿಗೆ ಶರಣಾಗುತ್ತಾನೆ. ಅವರಿಬ್ಬರಲ್ಲಿ ಅನುಭವದ ಮಂಥನ ನಡೆಯುತ್ತದೆ. ಸಿದ್ಧರಾಮನು ಕರ್ಮವನ್ನು ಎತ್ತಿ ಹಿಡಿಯುತ್ತಾನೆ. ಅಲ್ಲಮ ಪೂರ್ಣ ಯೋಗದ ಮಹತ್ವವನ್ನರಹುತ್ತಾನೆ. ಸ್ಥಾವರ ನಿಷ್ಠೆ ಮತ್ತು ಪ್ರಾಣಿದಯೆಯಲ್ಲಿ ಮೈ ಮರೆತಿದ್ದ ಸಿದ್ಧರಾಮನ ಕಣ್ಣ ಕತ್ತಲೆ ಹರಿಯುತ್ತದೆ. ಅವರಿಬ್ಬರೂ ಕಲ್ಯಾಣಕ್ಕೆ ಬರುತ್ತಾರೆ. ಇಲ್ಲಿ ಬಸವಣ್ಣ, ಚೆನ್ನಬಸವಣ್ಣ ಮತ್ತು ಇತರ ಶರಣರ ಒಡನಾಟ ಲಭಿಸುತ್ತದೆ. ಚೆನ್ನಬಸವಣ್ಣನಿಂದ ದೀಕ್ಷೆ ಪಡೆದು ತಾನೂ ಜ್ಯೋತಿಸ್ವರಪಿಯಾಗುತ್ತಾನೆ ಸಿದ್ಧರಾಮ. ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತದಿಂದ ಬರೆದ ವಚನಗಳಲ್ಲದೆ, “ಯೋಗಿನಾಥ” ಎಂಬ ಅಂಕಿತದಿಂದ “ಬಸವ ಸ್ತ್ರೋತ್ರದ ತ್ರಿವಿಧಿ” . “ಮಿಶ್ರ ಸ್ತ್ರೋತ್ರದ ತ್ರಿವಿಧಿ” “ಅಷ್ಟಾವರನ ಸ್ತ್ರೋತ್ರದ ತ್ರಿವಿಧಿ” ಮತ್ತು “ಸಂಕೀರ್ಣ ತ್ರಿವಿಧಿ” ಗಳನ್ನು ಬರೆದಿದ್ದಾನೆ.

ಮುಂದೆ ಕಲ್ಯಾಣದ ಮಹಾಮನೆಯ ಪರಂಪರೆಯನ್ನು ಸೊನ್ನಲಿಗೆಯಲ್ಲಿ ಮುಂದುವರೆಸಿಕೊಂಡು ಹೋದನೆಂದು ತಿಳಿದುಬರುತ್ತದೆ. ಕೊನೆಯಲ್ಲಿ, ಕೆರೆಯ ಮಧ್ಯದಲ್ಲಿ ಒಂದು ಸಮಾಧಿಯನ್ನು ನಿರ್ಮಿಸಿ ಅದರಲ್ಲಿನಿರ್ವಲಯನಾಗುತ್ತಾನೆ.

ಅಲ್ಲಮಪ್ರಭು



ಅಲ್ಲಮಪ್ರಭುಗಳ ಬಗ್ಗೆ ತಿಳಿದುಕೊಳ್ಳಲು ನಾನು ಕೆಲವು ಆಕರಗಳನ್ನು ಪರಿಶೀಲಿಸಿದಾಗ ನನಗೆ ಅತ್ಯಂತ ಸೂಕ್ತವೆನಿಸಿದ್ದು ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ “ಶರಣ ಕಥಾಮೃತ” ಕೃತಿಯಲ್ಲಿ ಅವರು ಅಲ್ಲಮಪ್ರಬುಗಳ ಬಗ್ಗೆ ಬರೆದ ಲೇಖನ. ಅದರಲ್ಲಿ ಅವರು ಬರೆದದ್ದನ್ನು ನಾನು ಮತ್ತೆ ಹೇಳುವುದಕ್ಕಿಂತ ಅವರ ಮಾತಿನಲ್ಲೇ ಓದುಗರ ಮನಸ್ಸನ್ನು ತಣಿಸುವುದು ಸರಿ ಎನಿಸಿತು. ಆದ್ದರಿಂದ ಅದನ್ನೇ ಇಲ್ಲಿ ಸಂಕ್ಷಿಪ್ತವಾಗಿ ಉದ್ಧರಿಸುತ್ತಿದ್ದೇನೆ:

“ಕನ್ನಡದ ಅಧ್ಯಾತ್ಮ ಶಿಖರ ಶ್ರೇಣಿಗಳಲ್ಲಿ ಅಲ್ಲಮಪ್ರಭು ಗೌರೀಶಂಕರ. ಬಸವಣ್ಣನವರ ವಿಚಾರ ಕ್ರಾಂತಿಯ ಮಹಾಪೂರಕ್ಕೆ ಜ್ಞಾನ ವೈರಾಗ್ಯಗಳ ನಿಯಂತ್ರಣವನ್ನು ನಿರ್ಮಿಸಿ ಮುನ್ನಡೆಸಿದವನು ಈತ,......... ಬಸವಣ್ಣನವರ ಕಾರ್ಯ ಕ್ಷೇತ್ರದಲ್ಲಿ ಪ್ರಭುದೇವ ವಹಿಸಿದ ಪಾತ್ರವನ್ನೂ, ವಚನಗಳಲಿ ಮೂಡಿ ನಿಂತ ಆತನ ನಿಲುವನ್ನೂ ಗಮನಿಸಿದಾಗ ಆತನ ಜೀವನ ಮತ್ತು ಸಾಧನೆಗಳನ್ನು ತಿಳಿಯಬೇಕೆಂಬ ಕುತೂಹಲ ಸಹಜವಾಗಿಯೇ ಉಂಟಾಗುತ್ತದೆ. ಆದರೆ ಆತನ ಜೀವನದ ವಿಚಾರವಾಗಿ ನಿರ್ದಿಷ್ಟವಾಗಿ ಹೇಳಬಹುದಾದ ಚಾರಿತ್ರಿಕವಾಗಿ ಅಂಶಗಳಿಗೆ ವಿಶೇಷ ಗಮನ ಕೊಟ್ಟಂತೆ ತೋರುವುದಿಲ್ಲ.
ಹರಿಹರಕವಿ ಬರೆದ “ಪ್ರಭು ದೇವರ ರಗಳೆ” ಯಾಗಲೀ, ಚಾಮರಸನ “ಪ್ರಬುಲಿಂಗಲೀಲೆ” ಯಾಗಲೀ ಅಲ್ಲಮನನ್ನು ಕುರಿತ ಚರಿತ್ರೆಗಳಲ್ಲ. ಅಲ್ಲಲ್ಲಿ ಚಾರಿತ್ರಿಕ ಅಂಶಗಳು ಸುಳಿಯಬಹುದು; ಆದರೆ ಆತನ ಜೀವನ ಚರಿತ್ರೆಯನ್ನು ಬರೆಯುವ ವಂತಹ ಖಚಿತವಾದ ಸಾಮಗ್ರಿಗಳನ್ನು ಅವು ಒದಗಿಸುವುದಿಲ್ಲ. ಅಲ್ಲದೆ ಆತನ ವಚನಗಳಲ್ಲಿಯೂ ಸ್ವವಿಷಯ ಹೆಚ್ಚು ಸಿಗುವುದಿಲ್ಲ. ಆದರೂ ಆ ವಚನಗಳಲ್ಲಿ ರೂಪಗೊಂಡ ವ್ಯಕ್ತಿತ್ವದ ಹಿನ್ನೆಲೆಯನ್ನು ಗಮನಿಸಿ ಮತ್ತು ಅವನನ್ನು ಕುರಿತು ಕಾವ್ಯಗಳಲ್ಲಿ ಬರುವ ಕೆಲವು ಅಂಶಗಳನ್ನು ಆಧರಿಸಿ ಆತನ ಜೀವನವನ್ನು ಒಂದೆರಡು ಮಾತುಗಳಲ್ಲಿ ಹೇಳಬಹುದು.
ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಹಳ್ಳಿಯಾಗಿ ಉಳುದಿರುವ ಬಳ್ಳಿಗಾವೆ ಅಲ್ಲಮಪ್ರಭುವಿನ ಜನ್ಮಸ್ಥಳ. .............
ಬಾಲಲೀಲೆಯನ್ನು ಮೆರೆಯುತ್ತ ಆಡುತಿಹ ಮಕ್ಕಳ ಜೊತೆಯಲ್ಲಿ ತಾನೂ ಮಗುವಾಗಿ ಬೆಳೆದ ಅಲ್ಲಮ. ಇವನ ಬಾಲ್ಯಜೀವನದ ಪರಿಸರಗಳಾಗಲೀ, ಮನೋವಿಕಾಸದ ಚಿತ್ರವಾಗಲೀ ಕಾಣಸಿಗದು. ಆದರೆ ತಾರುಣ್ಯದ ಪ್ರಾರಂಭದಲ್ಲಿಯೇ ಈತನ ಜೀವನದಲ್ಲೊಂದು ಪರಿವರ್ತನೆಯ ಘಟ್ಟ ಪ್ರಾಪ್ತವಾದಂತೆ ತೋರುತ್ತದೆ. ..............
ಸಂಸಾರವನ್ನು ಮೆಟ್ಟಿ ಮೇಲೆರುವ ಸಾಧನೆಗೆ ಪ್ರಭುವನ್ನು ಪ್ರಚೋದಿಸಿದ ಒಂದು ಘಟನೆ ನಡೆದಿರಬೇಕು. ಅದು ಹರಿಹರ ಹೇಳುವಂತಹ ಬಳ್ಳಿಗಾವೆಯ ಕಾಮಲತೆಯ ಪ್ರಸಂಗವಾಗಿರಬಹುದು ; ಅಥವಾ ಚಾಮರಸ ಹೇಳುವಂತೆ ಬನವಾಸಿಯ ಮಾಯಾದೇವಿಯ ಸನ್ನಿವೇಶವಾಗಿರಬಹುದು. ಅಂತೂ ಪ್ರಭುದೇವರಿಗೆ ತನ್ನ ಹೃದಯದ ಅಂತರಾಳದಲ್ಲಿ ಅಡಗಿದ್ದ ಅತೀವ ಆಕಾಂಕ್ಷೆಯ ಅರಿವಾಗಲು ಕಾರಣವಾದ ಒಂದು ನಿಮಿತ್ತ ಘಟನೆ ಸಂಭವಿಸಿರಬೆಕು. ಮುಂದೆ ಆತನ ವಚನಗಳಲ್ಲಿ ಕಾಣುವ ಜ್ಞಾನ ವೈರಾಗ್ಯಗಳು ಮೊದಲಿನಿಂದಲೂ ಆತನ ಜೀವನದಲ್ಲ್ಲಿ ಉಸಿರಾಟದಂತೆ ಸಹಜವಾಗಿದ್ದವು.............



“ಎಸೆಯದಿರು ಎಸೆಯದಿರು ಕಾಮಾ,ನಿನ್ನ ಬಾಣ ಹುಸಿಯಲೆಕೋ?
ಕಾಮ ಕ್ರೋಧಲೋಭಮೋಹಮದ ಮತ್ಸರ ಇದು ಸಾಲದೇ ನಿನಗೆ?
ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೆ ಮರಳು ಕಾಮಾ.”

ಒಮ್ಮೆ ಮನ್ಮಥ ಈತನ ಮೇಲೆ ಬಾಣವನ್ನು ಪ್ರಯೋಗಿಸಲು ಪ್ರಯತ್ನಿಸಿರಬಹುದು. ಅದು ಕಾಮಲತೆಯೋ, ಮಾಯಾದೇವಿಯೋ ಯಾರೇ ಆಗಿರಲಿ ಆ ಬಾಣಕ್ಕೆ ಆತನ ಮನಸ್ಸು ಸ್ವಲ್ಪ ಅಳುಕಿರಬೇಕು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡು ಹೇಳುತ್ತಾನೆ : “ಎಲೈ ಕಾಮಾ ನಿನ್ನ ಬಾಣವನ್ನು ನನ್ನಮೇಲೆ ಪ್ರಯೋಗಿಸ ಬೇಡ. ಅವು ಏಕೆ ವ್ಯರ್ಥವಾಗಬೇಕು? ಗುಹೇಶ್ವರನ ವಿರಹದುರಿಯಲ್ಲಿ ಬೆಂದಿರುವ ನನ್ನನ್ನು ನೀನು ಮತ್ತೊಮ್ಮೆ ಸುಡುವುದು ಸಾಧ್ಯವೆ?” ಎಂಬ ಆತ್ಮದ ಎಚ್ಚರಿಕೆಯಲ್ಲಿ ನುಡಿ ಅಲ್ಲಿ ಕಾಣುತ್ತದೆ. ಇನ್ನೊಂದು ಕಡೆಯಲ್ಲಿ : “ಗುಹೇಶ್ವರನ ವಿರಹದುರಿಯೊಳಗೆ ಬೆಂದವರ ಮರಳಿ ಸುಟ್ಟಿಹೆನೆಂಬ ಮರುಳೆ ನೋಡಯ್ಯ” ಎನ್ನುತ್ತಾರೆ.ಒಂದು ಹಂತದಲ್ಲಿ ಆತ ಕೈಗೊಂಡಿದ್ದ ಕಠಿಣವಾದ ಸಾಧನೆಗೆ ಈ ಮಾತುಗಳು ಸಾಕ್ಷಿಯಾಗಿವೆ.

ಇದು ಜಗತ್ತಿಗೆ ಅಗೋಚರವಾದ ಜೀವನದ ಭಾಗ. ಅಧ್ಯಾತ್ಮಿಕ ಅಭೀಪ್ಸೆಯಿಂದ ಆತ ಪರಿವ್ರಾಜಕ ಸಂನ್ಯಾಸಿಯಾಗಿ ಭರತ ಖಂಡದ ಆದ್ಯಂತವೂ ಸಂಚರಿಸಿರಬೇಕು; ನೂರಾರು ಸಾಧಕರನ್ನು ಸಂಧಿಸಿ ಅನೇಕ ಬಗೆಯ ಅನುಭವಗಳನ್ನು ಪಡೆದಿರಬೇಕು. ಆತನ ಅಗಾಧವಾದ ಲೋಕಾನುಭವ ಅಂತೆಯೇ ವಿವಿಧ ಯೋಗಗಳಲ್ಲಿ ಆತನ ಪರಿಣತಿ ಆಶ್ಚರ್ಯಕರವಾದುದು. ಹಠಯೋಗ ರಾಜಯೋಗ ಮೊದಲಾದ ಅನೇಕ ಮಾರ್ಗಗಳಲ್ಲಿ ಆತ ನೆಡೆದುದರ ಸ್ಪಷ್ಟವಾದ ಚಿತ್ರವನ್ನು ಅವನ ವಚನಗಳು ನಮಗೆ ತಂದುಕೊಡುತ್ತವೆ. ಇವುಗಳಿಂದ ಪೂರ್ಣ ತೃಪ್ತಿ ಆತನಿಗೆ ಲಭಿಸಲಿಲ್ಲ. ಭೂಮ (ಮಹತ್ತರ) ವಾದುದನ್ನು ಬಯಸಿದವನು ಆತ. ಆ ಅನುಭಾವವನ್ನು ಆತನಿಗೆ ತಂದುಕೊಟ್ಟ ಗುರು ಅನಿಮಿಷಯೋಗಿ. ಶಿವಯೋಗದ ನಿಲುವು ಈತನಿಂದ ಅಲ್ಲಮನಿಗೆ ಸಹಜ ಸ್ಥಿತಿಯಾಗಿ ಪರಿಣಮಿಸಿತು. ಎಲ್ಲ ಯೋಗಿಗಳ ರಹಸ್ಯವನ್ನು ಅರಿತ ಅಲ್ಲಮ ಪ್ರಭುವಿನ ಸಾಧನೆಯ ಕೊನೆಯ ಹಂತದಲ್ಲಿ ಅನಿಮಿಷನ ದರ್ಶನವಾಯಿತ್ತೆಂದು ಭಾವಿಸಬಹುದು. ...............
ಆತ ಪಡೆದ ಉಪದೇಶ ಎಂತಹುದು? “ಕೇಳಲಿಲ್ಲದ ಕರ್ಣಮಂತ್ರ, ತುಂಬಿ ತುಳುಕದ ಕಳಶಾಭಿಷೇಕ; ಆಗಮನವಿಲ್ಲದ ದೀಕ್ಷೆ, ಪೂಜೆಗೆ ಬಾರದ ಲಿಂಗ”. ಹೀಗೆ ಜ್ಞಾನಲಿಂಗೋಪದೇಶ ನಡೆಯುತ್ತದೆ. ಮಾತಿಗೆ ಮೀರಿದ ಅನುಭವವನ್ನು ಅನಿಮಿಷಯೋಗಿ ತನ್ನ ನೋಟದಿಂದಲೇ ಪ್ರಭುವಿನ ಹೃದಯದಲ್ಲಿ ನಿಹಿತಗೊಳಿಸುತ್ತಾನೆ. ಸತತ ಸಾಧನೆಯಿಂದ ಜಾಗೃತಗೊಂಡ ಹೃದಯಕ್ಕೆ ಆ ಶಿವಯೋಗಿಯ ಒಂದೇ ನೋಟ ಸಾಕಾಯಿತು ಪೂರ್ಣತೆಯನ್ನು ತಂದುಕೊಡುವುದಕ್ಕೆ...............
ಕೊನೆಗೆ ಅನಿಷಯೋಗಿಯ ಕರಸ್ಥಲದಲಿಂಗ ಪ್ರಭುದೇವನ ಹಸ್ತಪೀಠವನ್ನು ಸೇರುತ್ತದೆ. “ಗುಹೇಶ್ವರನೆಂಬ ಲಿಂಗವು ನಿರಾಕಾರವಾದ ಬಯಲು, ಅದು ಸಾಕಾರವಾಗಿ ಮುನ್ನ ಕರಸ್ಥಲಕ್ಕೆ ಬಂದರೆ ಹೇಳಲಮ್ಮೆ ಕೇಳಲಮ್ಮೆ”- ಎಂದು ಇಷ್ಟಲಿಂಗದ ಮಹತ್ತಿನಲ್ಲಿ ಪರವಶವಾಗುತ್ತದೆ ಆತನ ಮನಸ್ಸು........
ಇದು ಪ್ರಭುದೇವನ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ. ಇಲ್ಲಿಂದ ಮುಂದೆಲ್ಲ ತಾನು ಸಾಕ್ಷಾತ್ಕರಿಸಿಕೊಂಡ ಅನುಭಾವದ ಅನುಸಂಧಾನವನ್ನು ಸಾಧಕ ಜೀವಿಗಳ ಉದ್ಧಾರಕ್ಕಾಗ ಅನುವರಿತು ವಿನಿಯೋಗಿಸುವುದೇ ಆತನ ಲೀಲೆಯಾಗುತ್ತದೆ,........
ಸಾಧಕರ ಆಯಾ ಮನೋಧರ್ಮದ ಮಟ್ಟದಲ್ಲಿ ನಿಂದು ಅಲ್ಲಿಂದ ಮುಂದೆ ಅವರನ್ನು ಕೊಂಡೊಯ್ಯುವ ಅವನ ರೀತಿ ಅದ್ವಿತೀಯವಾದದ್ದು. ಅಣ್ಣನನ್ನು ಕಳೆದುಕೊಂಡು ಗೋಳಾಡುತ್ತಿರುವ ಮುಕ್ತಾಯಕ್ಕನನ್ನು ಎಚ್ಚರಿಸುವ ರೀತಿ ಒಂದಾದರೆ, ತೋಟಿಗ ಗೊಗ್ಗಯ್ಯನನ್ನು ಪರಿವರ್ತಿಸಿದುದು ಇನ್ನೊಂದು ರೀತಿ. ಯೋಗದ ಕೊನೆಯ ಹಂತದಲ್ಲಿ ನಿಂದು ಸಿದ್ಧರಾಮನನ್ನು ಶಿವಯೋಗಿಯನ್ನಾಗಿ ಮಾಡುವ ಬಗೆ ಬೇರೊಂದು. ಹಾಗೆಯೆ ಹಠಯೋಗದ ಸಿದ್ಧಿಗಳೇ ಪರಮಗುರುವೆಂಬ ಭ್ರಮೆಗೆ ಒಳಗಾಗಿ ಅಹಂಕಾರದಿಂದ ಮೆರೆಯುತ್ತಿದ್ದ ಗೋರಕ್ಷನನ್ನು ತಿದ್ದಿದ ಕ್ರಮವಂತೂ ಅಲ್ಲಮನ ಅಪೂರ್ವ ಸಿದ್ಧಿಗೆ ಉಜ್ಜ್ವಲ ಸಾಕ್ಷಿಯಾಗಿದೆ............
ಎಲ್ಲರೂ ಸಮಾನರೆಂದು ಸಾರುವ ಮಾನವ ಧರ್ಮವನ್ನು ಜೀವಂತಗೊಳಿಸಿ ಮಾನವತೆಯನ್ನು ಉದ್ಧರಿಸಲು ಹೆಣಗುತ್ತಿದ್ದ ಬಸವಣ್ಣನ ಕಾರ್ಯಕ್ಷೇತ್ರ ದಿನದಿನಕ್ಕೆ ವ್ಯಾಪಕವಾಗಿ ಬೆಳೆದು ದೇಶದ ನಾನಾ ಭಾಗಗಳಿಂದ ಅದು ಸಾಧಕರನ್ನು ಆಕರ್ಷಿಸಿತು. ಆ ಕಾರ್ಯ ಕ್ಷೇತ್ರ ವಿಸ್ತಾರವಾದಂತೆಲ್ಲ ಸಮಸ್ಯೆಗಳು ಹೆಚ್ಚಿದವು. ಆ ವೇಳೆಗೆ ಅಲ್ಲಮಪ್ರಭುವಿನಂತಹ ಜ್ಞಾನ ವೈರಾಗ್ಯಗಳ ತೇಜೋಮೂರ್ತಿಯೊಂದರ ಅವಶ್ಯಕತೆಯಿತ್ತು. ಬಸವೇಶ್ವರರ ಹೃದಯ ಅಂತಹ ಮಹಾ ಶಕ್ತಿಗಾಗಿ ಹಾರೈಸುತ್ತಿತ್ತು. ಆ ಕರೆಯನ್ನು ಕೇಳಿಯೋ ಎಂಬಂತೆ ಅಲ್ಲಮ ಪ್ರಭು ಕಲ್ಯಾಣಕ್ಕೆ ಬರುತ್ತಾನೆ...........
ಪ್ರಭು ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ವಹಿಸುತ್ತಾನೆ. ಅದರಿಂದ ಅನುಭವ ಗೋಷ್ಟಿಗಳಿಗೆ ಹೊಸ ಚೈತನ್ಯ ಬಂದಂತಾಗುತ್ತದೆ......
ಶರಣರ ಕಾರ್ಯಕ್ಷೇತ್ರದಲ್ಲಿ ಅನುಭವ ಮಂಟಪದ ಸ್ಥಾನ ಬಹಳ ಹಿರಿದಾದದ್ದು, ಮಹತ್ವಪೂರ್ಣವಾದದ್ದು. ಬಸವಣ್ಣ ಯಾವುದನ್ನೂ ಕುರುಡುನಂಬಿಕೆಯಿಂದ ಒಪ್ಪಿಕೊಳ್ಳುವಂತೆ ಬೋಧಿಸಲಿಲ್ಲ. ಆತನದು ವಿಚಾರಪ್ರಧಾನ ಮಾರ್ಗ. ಯಾರೋ ಹೇಳಿದರೆಂದಾಗಲಿ ಅಥವಾ ಯವುದೇ ಗ್ರಂಥದಲ್ಲಿ ಉಕ್ತವಾಗಿದೆ ಎಂದಾಗಲಿ ಒಪ್ಪಿಕೊಳ್ಳದೆ ಒಂದು ತತ್ವದ ಯೋಗ್ಯತೆಯನ್ನು ಸ್ವತಂತ್ರ ವಿಚಾರ ಶಕ್ತಿಯಿಂದ ಪರಿಶೀಲಿಸಬೇಕು. ವ್ಯಕ್ತಿ ಮತ್ತು ಸಮಾಜಗಳ ಹಿತಕ್ಕೆಸ್ ಕಾರಣವಾದವುಗಳನ್ನು ಮಾತ್ರ ಅಂಗೀಕರಿಸಬೇಕು. ಧರ್ಮದ ಮೂಲಭೂತವಾದ ಆದರ್ಶಗಳು, ತತ್ವ ಗಳು ಚಿರಂತನವಾದವುಗಳೇನೋ ಹೌದು. ಆದರೆ ಸಮಾಜ ನಿತ್ಯ ಪರಿವರ್ತನಶೀಲವಾದುದರಿಂದ ಸಮಸ್ಯೆಗಳು ಕಾಲಕಾಲಕ್ಕೆ ಬದಲಾಗುತ್ತವೆ.ಧರ್ಮವು ಆ ಹೊಸ ಪರಿಸ್ಥಿತಿಗೆ ಅನುಗುಣವಾಗಿ ಅಳವಟ್ಟು ವ್ಯಕ್ತಿಯ ಉದ್ಧಾರವನ್ನು ಸಾಧಿಸುವಂತಿರಬೇಕು- ಎಂಬ ಈ ಹೊಸ ವಿಚಾರ ಧಾರೆಯನ್ನು ಬಸವಣ್ಣ ಪ್ರತಿಪಾದಿಸಿದ ಮತ್ತು ಅದನ್ನು ಚರ್ಚಿಸಿ ಅನುಷ್ಠಾನಕ್ಕೆ ತರಲು ಅವಕಾಶಮಾಡಿ ಕೊಟ್ಟ. ಅಂತಹ ಚರ್ಚೆಗಳು ನಡೆಯುತ್ತಿದ್ದ ಸ್ಥಳವೇ ಅನುಭವ ಮಂಟಪ. .
............ದೇಶದ ಎಲ್ಲಾ ಭಾಗಗಳಿಂದಲೂ, ಜೀವನದ ಎಲ್ಲಾ ರಂಗಗಳಿಂದಲೂ ಬಸವಣ್ಣನ ಕಾರ್ಯಕ್ಷೇತ್ರಕ್ಕೆ ಬಂದು, ಅಧ್ಯಾತ್ಮ ಸಾಧನೆಯಲ್ಲಿ ಸೇರಿದ ಶರಣರ ಗೋಷ್ಠಿಗೆ ಅಲ್ಲಮ ಪ್ರಭುವಿನಂತಹ ಮಹಾ ಅನುಭಾವಿಯೂ ಮಾರ್ಗದರ್ಶಕ ಶಕ್ತಿಯಾಗಿ ದೊರೆತದ್ದು ಬಸವೇಶ್ವರನ ಹಾರೈಕೆಯ ಫಲ ಮತ್ತು ಶರಣರ ಪುಣ್ಯದ ಬಲ ಎನ್ನಬಹುದು. ...........
ಸತ್ಯವನ್ನು ನಿಷ್ಠುರವಾಗಿ ಸಾರಿ ಸಾಧಕರನು ಚುಚ್ಚಿ ಎಚ್ಚರಿಸುವ ಅಲ್ಲಮ ಪ್ರಭುವಿನಂತಹ ವ್ಯಕ್ತಿ ಆಗ ಆವಶ್ಯಕವಾಗಿ ಬೇಕಾಗಿತ್ತು. ಬೆಳ್ಳಗಿರುವುದೆಲ್ಲ ಹಾಲೆಂದು ನಂಬುವ ಬಸವಣ್ಣನ ಭಕ್ತಿ ಭಾವುಕ ಮನೋಧರ್ಮ ಅನೇಕ ವೇಳೆ ಅಡ್ಡಿ ಆತಂಕಗಳನ್ನು ತಂದೊಡ್ಡುತ್ತಿದ್ದತೆಂದು ತೋರುತ್ತದೆ. ಆದರೆ ಅಲ್ಲಮ ಬಂದುದು ಆತನ ಕಾರ್ಯಕ್ಷೇತ್ರಕ್ಕೆ ಬೆನ್ನೆಲಬು ಬಂದಂತಾಯಿತು. ಒಂದು ಕಡೆಯಲ್ಲಿ ಬಸವಣ್ಣನ ಹೊಸ ಭಾವನೆಗಳನ್ನು ಪ್ರತಿಭಟಿಸುತ್ತಿದ್ದ ಪರಂಪರಾಪ್ರಿಯರಾದ ವಿರೋಧಿ ಶಕ್ತಿಗಳಿಗೂ, ಇನ್ನೊಂದು ಕಡೆಯಲ್ಲಿ
ಸ್ವಜನರಂತೆ ವೇಷಧರಿಸಿದ್ಧ ಆಡಂಬರ ಜೀವಿಗಳಿಗೂ ಏಟು ಬಿದ್ದಂತಾಯಿತು. “ಲಾಂಛನಕ್ಕೆ ಶರಣೆಂಬೆ ಅವರಂಅತರಂಗವ ನೀನೇ ಬಲ್ಲೆ” ಎಂದು ಬಸವಣ್ಣ ಹೇಳಿದಂತೆ ; “ಲಾಂಛನಧಾರಿ ವೇಷವಧರಿಸಿ ಆಸೆಯಿಂದ ಘಾಸಿಯಾಗಲೇಕಯ್ಯ? ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವವರನೇನೆಂಬೆ ಗುಹೇಶ್ವರಾ? ಎಂದು ನಿಷ್ಠುರವಾಗಿ ನುಡಿಯುತ್ತಾನೆ ಅಲ್ಲಮಪ್ರಭು. .......................................................................
ಹೀಗೆ ಆತನ ಮಾತುಗಳಲ್ಲಿ ಹೆಜ್ಜೆ ಹೆಜ್ಜೆಗೂ ಸ್ವತಂತ್ರ ಮನೋಧರ್ಮವನ್ನು ಸಂಪ್ರದಾಯಕ್ಕೆ ಅತೀತವಾದ ವಿಶ್ವವ್ಯಾಪಾ ಭಾವನೆಗಳನ್ನೂ ಕಾಣುತ್ತೇವೆ. ಎಲ್ಲ ಕಾಲಕ್ಕೂ ಎಲ್ಲ ಜನಾಂಗಕ್ಕೂ ಮಾರ್ಗದರ್ಶಕವಾಗಬಲ್ಲ ಯೋಗ್ಯತೆ ಅವುಗಳಲ್ಲಿದೆ. ಆತ ಯಾವುದನ್ನೂ ಮೂಢನಂಬಿಕೆಯಿಂದ ನಂಬಿದವನಲ್ಲ. ಧರ್ಮಮಾರ್ಗದಲ್ಲಿ ಮುನ್ನಡೆಯಬೇಕಾದರೆ ಕುರುಡು ನಂಬಿಕೆಯಿಂದಾಗಲಿ ಅಥವಾ ಬುದ್ಧಿಯ ವಿತಂಡ ತರ್ಕದಿಂದಾಗಲಿ ಸಾಧ್ಯವಿಲ್ಲ. ವಿಚಾರವಾದಕ್ಕೆ ಮಾನ್ಯತೆಯನ್ನಿತ್ತರೂ ಅದನ್ನು ಒಳಗೊಂಡ ಶ್ರದ್ಧೆ ಮತ್ತು ಆಚರಣೆ ಅಗತ್ಯವೆನ್ನುತ್ತಾನೆ. ಆ ಅರ್ಥದಲ್ಲಿ ಆತ ವೇದ ಪುರಾಣಗಳನ್ನು ಕುರಿತು: “ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ............” ಎಂಬುದಾಗಿಯೂ .............ಹೇಳಿರುವುದು. ಇದರಿಂದ ಅಲ್ಲಮನು ವೇದ ಶಾಸ್ತ್ರ ನಿಂದಕನೆಂದರ್ಥವಲ್ಲ. ಅದು ಕೇವಲ ಬುದ್ಧಿ ಚಮತ್ಕಾರವಾದಾಗ ವ್ಯರ್ಥವಾಗುತ್ತದೆ. ಸತ್ಯ ಇವುಗಳ ಆಚೆಗಿದೆ ಎಂಬುದನ್ನು ಅನುಭಾವ ಪೂರ್ವಕವಾಗಿ ಕಂಡುಕೊಳ್ಳಬೇಕು ಎಂಬ ಸೂಚನೆ ಮಾತ್ರ......................
ಅಲ್ಲಮಪ್ರಭು ಅನುಭವಮಂಟಪದ ಗೋಷ್ಠಿಗಳಲ್ಲಿ ಪ್ರಮುಹ ಸ್ಥಾನ ವಹಿಸಿ ಅದನ್ನು ಒಂದು ವ್ಯವಸ್ಥೆಗೆ ತಂದ ಮೇಲೆ ಸಹಜ ಜಂಗಮನಾದ ಆತ ಮತ್ತೆ ಸಂಚಾರವನ್ನು ಕೈಗೊಳ್ಳಲು ಉದ್ದೇಶಿಸುತ್ತಾನೆ. ಇದನ್ನು ತಿಳಿದ ಬಸವಣ್ಣನ ಮನಸ್ಸು ತಳಮಳಗೊಳ್ಳುತ್ತದೆ. ಪ್ರಭು ಅವನನು ಸಮಾಧಾನ ಗೊಳಿಸಿ ಮತ್ತೆ ಬರುವುದಾಗಿ ಆಶ್ವಾಸನೆಯಿತ್ತು ಹೊರಡುತ್ತಾನೆ. ........
......ದೀರ್ಘಕಾಲ ಸಂಚಾರವನ್ನು ಕೈಗೊಂಡ ನಂತರ ಮತ್ತೆ ಕಲ್ಯಾಣದತ್ತ ಅಭಿಮುಖವಾಗಿ ಬರುತಾನೆ. ಇತ್ತ ಬಸವೇಶ್ವರ ಶೂನ್ಯಸಿಂಹಾಸನವಮ್ಮು ರಚಿಸಿ ಪ್ರಭುದೇವನ ಬರವನ್ನು ಹಾರೈಸುತ್ತಿರಲು ಆತನ ಆಗಮನದ ಸೂಚನೆಯಾಗುತ್ತದೆ. ಅರೆ ಮರುಳನ ವೇಶದಿಂದ ಬಂದ ಅತನನ್ನು ಅರೆ ಕ್ಷಣದಲ್ಲಿ ಗುರುತಿಸಿ ಸಂಭ್ರಮದಿಂದ ಕರೆತಂದು ಶೂನ್ಯಸಿಂಹಾಸನದ ಮೇಲೆ ಕುಳ್ಳರಿಸುತ್ತಾನೆ. ..............ಪ್ರಭು ಮತ್ತೆ ಅನುಭವ ಮಂಟಪದಲ್ಲಿ ಕೇಂದ್ರ ಸ್ಥಾನವನ್ನು ವಹಿಸಿಕೊಂಡನು. ............................ಮಾನವ ಜಾತಿ ಒಂದೇ ಎಂದು ಬಸವಣ್ಣ ಸಾಧಿಸಿದ ಅತ್ಯುನ್ನತ ವಾದ ಸಮಾನತೆ ಅಂದಿನ ವಾತಾವರಣದಲ್ಲಿ ಬಹಳ ಕ್ರಾಂತಿಕಾರಕವಾಗಿ ಪರಿಣಮಿಸಿತು. ಕೊನೆಗೆ ಅಸ್ಪೃಶ್ಯನೆನಿಸಿದ್ದ ಹರಳಯ್ಯ ಮತ್ತು ಬ್ರಾಹ್ಮಣ ಮಧುವರಸ ಇಅವರ ಬಾಂಧವ್ಯವನ್ನಂತೂ ಆ ಯುಗ ಅರಗಿಸಿಕೊಳ್ಳಲಾರದೇ ಹೋಯಿತು. ಅದೇ ಕಾರಣವಾಗಿ ಕಲ್ಯಾಣದಲ್ಲಿ ದೊಡ್ಡ ಕ್ರಾಂತಿಯಾಯಿತು. ಶರಣರೆಲ್ಲ ಚದುರ ಬೇಕಾಯಿತು.
ಇದರ ಸ್ವಲ್ಪ ಮುನ್ನವೇ ಅಲ್ಲಮಪ್ರಭು ಕಲ್ಯಾಣದಲ್ಲಿ ತನ್ನ ಕರ್ತವ್ಯ ಮುಗಿಯುತ್ತ ಬಂದುದನ್ನು ತಿಳಿದುಕೊಂಡ. ಶೂನ್ಯಸಂಪಾದನೆಯಲ್ಲಿ “ಶರಣರ ಅವಸಾನ ಪರಾಮರಿಕೆ” ಎಂಬ ಭಾಗದಲ್ಲಿ ಅಲ್ಲಮಪ್ರಭು ಶರಣರೆಲ್ಲರಿಗೂ ನಿರ್ದೇಶನ ಕೊಟ್ಟ ಮಾತುಗಳು ಬರುತ್ತವೆ. ಬಸವಣ್ಣನಿಗೂ ಮುಂದಿನ ಕರ್ತವ್ಯವನ್ನು ಸೂಚಿಸಿ ಶ್ರೀಶೈಲದ ಕಡೆಗೆ ಹೊರಟ. ಶ್ರೀಶೈಲದ
ಮಲ್ಲಿಕಾರ್ಜುನನ್ನು ದಾಟಿ ಆ ಪರ್ವತಗಳ ಸಾಲಿನಲ್ಲಿರುವ ಕದಳಿಯ ವನಕೆ ಆತನ ಪ್ರಯಾಣ ಮುಂದುವರಿಯಿತು. ಹಿಂದೊಮ್ಮೆ ಸಂಚಾರವನ್ನು ಕೈಗೊಂಡು ಬಂದಾಗ ಅದಳಿಗೆ ಆತ ಹೋಗಿ ಅಲ್ಲಿ ಕೆಲದಿನಗಳು ಇದ್ದಿರಬೇಕೆಂದು ತೋರುತ್ತದೆ..............
ಆತನ ವಚಗಳಲ್ಲಿರುವ : ತ್ರಿಕೂಟಗಿರಿ” “ಬಟ್ಟಬಯಲು” “ಕಾಣಬಾರದ ಕದಳಿವನ” ಈ ಮಾತುಗಳು ಕದಳಿವನವಿರುವ ಭೌಗೋಳಿಕ ಸನ್ನಿವೇಶವನ್ನು ಯಥಾವತ್ತಾಗಿ ಸೂಚಿಸುತ್ತಿವೆ. ಅಲ್ಲದೆ ಆ ಸ್ಥಳಗಲು ಅಲ್ಲಮನಿಗೆ ಪೂರವ ಪರಿಚಿತವೆಂದು ಮನದಟ್ಟು ಮಾಡಿಕೊಡುತ್ತವೆ. ...............
.....ತನ್ನ ಸಮರಸದ ಕೊನೆಯ ನಿಲುವಿನಲ್ಲಿ ಲೀನವಾಗಲು ಆ ಸ್ಥಳವನ್ನು ಆರಿಸಿಕೊಳ್ಳುತ್ತಾನೆ............
ಅಲ್ಲಮಪ್ರಭು ಅಧ್ಯಾತ್ಮದ ಅನುಭವದಲ್ಲೆಂತೋ ಅಂತೆಯೇ ಅದನ್ನು ಅಭಿವ್ಯಕ್ತಗೊಳಿಸುವುದರಲ್ಲಿಯೂ ಅದ್ವಿತೀಯ. ಈ ಶಕ್ತಿ ಅವನಿಗೆ ಜೀವನದ ಅಪಾರ ಅನುಭವದಿಂದ ಮತ್ತು ಅಭ್ಯಾಸದಿಂದ ಉಂಟಾದಂತೆ ತೋರುತ್ತದೆ. ತೆರೆದ ಕಣ್ಣುಗಳಿಂದ ಜೀವನವನ್ನು ನೋಡಿದವನು ದಿಟ್ಟತನದಿಂದ ಸಮಸ್ಯೆಗಳ ಹಿಮಾಲಯವನ್ನು ಮೆಟ್ಟಿ ನಿಂತು, ಸಾಧನೆಯಲ್ಲಿ ಮೇಲೇರಿ ಸತ್ಯವನ್ನು ಕಂಡವನು ವಿವಿಧ ದರ್ಶನ ಸಾಹಿತ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದವನು.ಮೇಲಾಗಿ ದೈವದತ್ತವಾದ ಪ್ರತಿಭೆಯನ್ನು ಪಡೆದುಕೊಂಡವನು. ಈ ಎಲ್ಲದರಿಂದ ವಿಕಾಸಗೊಂಡು ಅವನ ಚೇತನ ವಚನಗಳ ರೂಪದಲ್ಲಿ ಮಿಡಿದಿದೆ. ಅಲ್ಲಿ “ಮಾತೆಂಬುದು ಜ್ಯೋತಿರಲಿಂಗ” ವಾಗಿ ಪರಿಣಮಿಸಿದೆ.”

-ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ “ಶರಣ ಕಥಾಮೃತ” ದಿಂದ.





ಹಡಪದ ಲಿಂಗಮ್ಮ



ಹಡಪದ ಲಿಂಗಮ್ಮನವರ ಬೆಗ್ಗೆ ಯಾವ ಮಾಹಿತಿಯೂ ದೊರೆಯುವುದಿಲ್ಲ. ಆದರೆ ಅವರ ೧೧೪ ವಚನಗಳು ಸಿಕ್ಕಿರುವುದರಿಂದ ಅವುಗಳಲ್ಲಿ ಅವರ ವ್ಯಕ್ತಿತ್ವದ ಹೊಳಹು ತೋರುತ್ತದೆ. ಅವರು ಹಡಪದ ಅಪ್ಪಣ್ಣನವರ ಪತ್ನಿ. ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಆಪ್ತರಾದವರು. ಸದಾ ಅವರ ಸೇವೆಯಲ್ಲಿ ನಿರತರಾಗಿದ್ದವರು. ಹಡಪದ ಎಂದರೆ ಕ್ಷೌರಿಕ ಅಥವಾ ವೀಳ್ಯೆದೆಲೆಯನ್ನು ಹಾಕಿ ಕೊಡುವ ವೃತ್ತಿಯವರು ಎಂಬ ಅರ್ಥವಿದೆ. ಆದರೆ ಇಬ್ಬರ ವಚನಗಳಲ್ಲಿಯೂ ಆ ವಿಷಯದ ಬಗ್ಗೆ ಯಾವ ಉಲ್ಲೇಖವೂ ಸಿಗುವುದಿಲ್ಲ. ಹಡಪ ಎಂದರೆ ಸಣ್ಣ ಪೆಟ್ಟಿಗೆ (ಸಾಮಾನ್ಯವಾಗಿ ಕ್ಷೌರಿಕ ವೃತ್ತಿಗೆ ಬೇಕಾಗುವ/ತಾಂಬೂಲ ಹಾಕಿಕೊಳ್ಳಲು ಬೇಕಾಗುವ ವಸ್ತುಗಳನ್ನು ಇಡುವ ಸಣ್ಣ ಪೆಟ್ಟಿಗೆ) ಎಂಬ ಅರ್ಥವಿರುವುದರಿಂದ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ತುರ್ತಾಗಿ ಬೇಕಾಗುವ ವಸ್ತುಗಳನ್ನು ಸಣ್ಣ ಪೆಟ್ಟಿಗೆಯಲ್ಲಿ ಇಟ್ಟುಕೊಂದು ಸದಾ ಅವರ ಸೇವೆಯಲ್ಲಿ ನಿರತರಾಗಿರುತ್ತಿದ್ದರು ಎಂದು ಅರ್ಥೈಸಬಹುದು. ಮೂಲತಃ ಅವರು ಕ್ಷೌರಿಕರಾಗಿದ್ದಿರಬಹುದು. ಬಸವಣ್ಣನವರ ಸಂಪರ್ಕದಲ್ಲಿ ಬಂದನಂತರ ಅದನ್ನು ಬಿಟ್ಟಿರಬಹುದು. ಅವರು ಮಹಾ ಅನುಭಾವಿಗಳಾಗಿದ್ದರು. ಅಲ್ಲಮಪ್ರಭುಗಳು ಸಿದ್ಧರಾಮರೊಂದಿಗೆ ಮಹಾ ಮನೆಗೆ ಬಂದಾಗ ಅವರನ್ನು ಗುರುತಿಸುವಂತಹ ಸಾಮರ್ಥ್ಯ ಅವರದ್ದು. ಅವರ ಸೇವಾ ನಿಷ್ಠೆ ಅದ್ವಿತೀಯವಾದದ್ದು. ಕೂಡಲಸಂಗಮಕ್ಕೆ ಹೋದಾಗ ಬಸವಣ್ಣನವರು ನೀಲಾಂಬಿಕೆಯನ್ನು ಕರೆತರಲು ಅಪ್ಪಣ್ಣನವರನ್ನೇ ಕಳಿಸುತ್ತಾರ
ಅವರ ೨೪೬ ವಚಗಳು ಲಭ್ಯವಿವೆ. ಲಿಂಗಮ್ಮನವರು ಇವರ ಪುಣ್ಯಸ್ತ್ರೀ. ಹಡಪದ ಅಪ್ಪಣ್ಣನವರೇ ತನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದಿರುವರು ಎಂದು ಆಕೆ ಹೇಳುತ್ತಾಳೆ. ಆಕೆಯ ವಚನಗಳಿಂದ ಚೆನ್ನಮಲ್ಲೇಶರು ಆಕೆಯ ಗುರುಗಳು ಎಂದು ತಿಳಿದು ಬರುತ್ತದೆ. ಆಕೆಯ ವಚನಗಳಲ್ಲಿ ಮನದ ಚಂಚಲತೆ, ಘನವನ್ನು ಕಾಣಲು ಮನವನ್ನು ಸಿದ್ಧಗೊಳಿಸುವ ಬಗೆ, ತೋರಿಕೆಯ ಭಕ್ತಿಯ ಖಂಡನೆ ಇತ್ಯಾದಿ ವಿಷಯಗಳು ಕಂಡುಬರುತ್ತವೆ. ಕೀಳು ಕುಲದಲ್ಲಿ ಹುಟ್ಟಿಬಂದ ಲಿಂಗಮ್ಮ “ಕನಿಷ್ಟದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ, ಸತ್ಯ ಶರಣರ ಪಾದ ಹಿಡಿದು.............ಕಂಗಳ ಮುಂದಣ ಕತ್ತಲೆ ಹರಿಯಿತ್ತು....... ಮಂಗಳದ ಮಹಾ ಬೆಳಗಿನೊಳಗೋಲಾಡಿದೆ” ಎಂದು ಹೇಳುತ್ತಾಳೆ.




ಷಣ್ಮುಖಸ್ವಾಮಿಗಳು:



ಕ್ರಿಸ್ತ ಶಕ ೧೬೩೯ ರಲ್ಲಿ ಕಲಬುರ್ಗಿಯ ಜೇವರ್ಗಿಯಲ್ಲಿ ಇವರ ಜನನ ವಾಯಿತೆಂದು ತಿಳಿಯುತ್ತದೆ. ಇವರು ಅಖಂಡೇಶ್ವರರ ಶಿಷ್ಯರು. ಅಖಂಡೇಶ್ವರರು ಎಲ್ಲಿಂದಲೋ ಬಂದು ಜೇವರ್ಗಿಯಲ್ಲಿ ಭಕ್ತರಿಗಾಗಿ ನೆಲೆಸಿದವರು. ಅವರ ಪ್ರಮುಖ ಶಿಷ್ಯರಾದ ಮಲ್ಲಪ್ಪಶೆಟ್ಟಿ ಮತ್ತು ದೊಡ್ಡಮಾಂಬೆಯವರ ಪುತ್ರರು ಷಣ್ಮುಖಸ್ವಾಮಿಗಳು. ಅಸಾಧಾರಣ ಬುದ್ಧಿ ಶಕ್ತಿಯುಳ್ಳ ಇವರು ಅಖಂಡೇಶ್ವರರ ಮಾರ್ಗದರ್ಶನದಿಂದ ತಮ್ಮ ವಯಸ್ಸಿಗೆ ಮೀರಿದ ಸಾಧನೆಯನ್ನು ಮಾಡಿ ಗುರುಗಳಿಂದ ಜಂಗಮ ದೀಕ್ಷೆಯನ್ನು ಪಡೆದರು. ಶಿವಯೋಗದ ಅನುಭವವನ್ನು ಶಿಷ್ಯನಿಗೆ ಅನುಗ್ರಹಿಸಿದರು ಗುರುಗಳು. ಗುರುಗಳು ಅಚ್ಚರಿಪಡುವಂತಹ ಯೋಗಸಿದ್ಧಿ ಅವರದ್ದಾಗಿತ್ತು. ಇದಾದ ನಂತರ ಗುರುಗಳು ಇವರನ್ನು ಲೋಕಸಂಚಾರಕ್ಕಗಿ ಕಳಿಸಿದರು. ಹಿಂತಿರುಗಿ  ಷಣ್ಮುಖರು ಜೇವರಗಿಯ ಕೋಳಕೂರು ಎಂಬ ಗ್ರಾಮಕ್ಕೆ ಬಂದರು. ಅಲ್ಲಿ ಭೀಮಾ ನದಿಯ ದಡದ ಒಂದು ಏಕಾಂತ ಸ್ಥಳದ ದೇವಾಲಯದಲ್ಲಿ ಶಿವಯೋಗದ ಅನುಷ್ಠಾನಕ್ಕೆ ತೊಡಗಿದರು. ಗುರುಗಳು ಶಿಷ್ಯನ ಆಗಮನದಿಂದ ಸಂತುಷ್ಟರಾಗಿ ಆತನನ್ನು ಜೇವರ್ಗಿಗೆ ಕರೆಸಿಕೊಂಡರು. ಮಠದ ಅಧಿಕಾರವನ್ನು ಆತನಿಗೆ ವಹಿಸಿಕೊಟ್ಟು ತಾವು ಲಿಂಗೈಕ್ಯರಾದರು.   
ಷಣ್ಮುಖರಿಗೆ  ಬಸವಣ್ಣನವರ ಬಗ್ಗೆ ಅಪಾರ ಶ್ರದ್ಧೆ ಇತ್ತು. ಇದು ಅವರ ಅನೇಕ ವಚಗಳಲ್ಲಿ ಎದ್ದು ಕಾಣುತ್ತದೆ. ಅವರಲ್ಲಿ ಅಂತರಂಗ ಶುದ್ಧಿಯ ನಿಷ್ಠೆಯು ಕಂಡು ಬರುತ್ತದೆ.  ತಾವು ಶಿವಯೋಗವನ್ನು ಸಾಧಿಸಿದುದರ ಉದ್ಗಾರವನ್ನು ಅವರ ವಚನಗಳಲ್ಲಿ ಕಾಣುತ್ತೇವೆ.

“ನಿಮ್ಮ ಅವಿರಳ ಮಹಾಬೆಳಗಿನೊಳಗೆ  ಮುಳುಗಿ 
ನಾನು ನೀನೆಂಬುಭಯದ ಉರುಹ ಮರೆದು
ಏನೂ ಅರಿಯದಿರ್ದೆನಯ್ಯ ಅಖಂಡೇಶ್ವರಾ” ಎಂದು ಹೇಳುತ್ತಾರೆ.

ಅನುಭಾವವನ್ನು ಹೇಳುವ ರಚನೆಗಳಿಂದ ಮತ್ತು ತಮ್ಮ ವ್ಯಕ್ತಿತ್ವದಿಂದ ಷಣ್ಮುಖರು ಜನರನ್ನು ಆಕರ್ಷಿಸಿದರು.ಜೇವರ್ಗಿಯನ್ನು ಆಧ್ಯಾತ್ಮಿಕ ಸ್ಥಳವನ್ನಾಗಿ ಮಾಡಿದರು. ೭೨ ವರ್ಷಗಳವರೆಗೆ ಬದುಕಿ ಕ್ರಿಸ್ತ ಶಕ ೧೭೧೧ ರಲ್ಲಿ ಲಿಂಗೈಕ್ಯರಾದರೆಂದು ತಿಳಿಯುತ್ತದೆ. 




ಹಡಪದ ಅಪ್ಪಣ್ಣ




ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಬಹಳ ಆಪ್ತರಾಗಿದ್ದರು. ಸದಾ ಅವರ ಸೇವೆಯಲ್ಲಿ ನಿರತರಾಗಿದ್ದರು. ಹಡಪದ ಎಂದರೆ ಕ್ಷೌರಿಕ ಅಥವಾ ವೀಳ್ಯೆದೆಲೆಯನ್ನು ಹಾಕಿ ಕೊಡುವ ವೃತ್ತಿಯವರು ಎಂಬ ಅರ್ಥವಿದೆ. ಆದರೆ ಅಪ್ಪಣ್ಣನವರ  ವಚನಗಳಲ್ಲಿ ಆ ವಿಷಯದ ಬಗ್ಗೆ ಯಾವ ಉಲ್ಲೇಖವೂ ಸಿಗುವುದಿಲ್ಲ. “ಹಡಪ” ಎಂದರೆ ಸಣ್ಣ ಪೆಟ್ಟಿಗೆ (ಸಾಮಾನ್ಯವಾಗಿ ಕ್ಷೌರಿಕ ವೃತ್ತಿಗೆ ಬೇಕಾಗುವ ಅಥವಾ ತಾಂಬೂಲ ಹಾಕಿಕೊಳ್ಳಲು ಬೇಕಾಗುವ ವಸ್ತುಗಳನ್ನು ಇಡುವ ಸಣ್ಣ ಪೆಟ್ಟಿಗೆ) ಎಂಬ ಅರ್ಥವಿರುವುದರಿಂದ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ತುರ್ತಾಗಿ ಬೇಕಾಗುವ ವಸ್ತುಗಳನ್ನು ಸಣ್ಣ ಪೆಟ್ಟಿಗೆಯಲ್ಲಿ ಇಟ್ಟುಕೊಂದು ಸದಾ ಅವರ ಸೇವೆಯಲ್ಲಿ ನಿರತರಾಗಿರುತ್ತಿದ್ದರು ಎಂದು ಅರ್ಥೈಸಬಹುದು. ಅಪ್ಪಣ್ಣನವರು ಬಸವಣ್ಣನವರಿಗೆ ಬಿಜ್ಜಳನ ಆಸ್ಥಾನಕ್ಕೇ  ಕಳಿಸಿಕೊಟ್ಟ ತಾಂಬೂಲದ ಪವಾಡದ ಕಥೆಯೊಂದು “ಶರಣ ಲೀಲಾಮೃತ” ದಲ್ಲಿದೆ. ಇಷ್ಟರಿಂದಲೇ ಅಪ್ಪಣ್ಣನವರ ಕಾಯಕವು ತಾಂಬೂಲವನ್ನು ಸಿದ್ಧಗೊಳಿಸಿಕೊಡುವುದೇ ಆಗಿತ್ತೆಂದು  ಹೇಳಲಾಗುವುದಿಲ್ಲ. ಅವರು ಯಾವರೀತಿಯಾಗಿ ಬಸವಣ್ಣನವರ ಸೇವೆ ಮಾಡುತ್ತಿದ್ದರೆಂಬುದು ಈ ಕೆಳಗಿನ ವಚನಗಳಿಂದ ತಿಳಿದಬರುತ್ತದೆ.

ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು
ಎನ್ನ ಅರಿವು ನಿಮ್ಮ ಘನದೊಳಗೆ ಸವೆದು
ನಿಶ್ಚಲ ನಿಜೈಕ್ಯವಾಗಿ ಬಸವಪ್ರಿಯ ಕೂಡಲಸಂಗಯ್ಯಾ
ನಾನಿನೆಂಬುದು ಏನಾಯಿತ್ತೆಂದರಿಯೆ

ಎನ್ನ ಆಚಾರವಿಚಾರ ಬಸವಣ್ಣಂಗರ್ಪಿತವಾದವು
ಎನ್ನ ಅವಧಾನ ಅನುಭಾವ ಬಸವಣ್ಣಂಗರ್ಪಿತವಾದವು
ಎನ್ನ ಸರ್ವಾಚಾರ ಸಂಪತ್ತು ಬಸವಣ್ಣನಲ್ಲಿ ವೇದ್ಯವಾಯಿತ್ತು
ಬಸವಪ್ರಿಯ ಕೂಡಲ ಸಂಗಮದೇವರಲ್ಲಿ ನಿಜವಾಸಿಯಾಗಿರ್ದೆನು.


ಈ ವಚನಗಳಿಂದ ಅಪ್ಪಣ್ಣನವರಿಗೆ ಬಸವಣ್ಣನವರ ಬಗ್ಗೆ  ಇದ್ದ ಆಳವಾದ  ನಿಷ್ಠೆ ಮತ್ತು ಭಕ್ತಿಯ ಪರಿಚಯವಾಗತ್ತದೆ. 
ಅವರು ಮಹಾ ಅನುಭಾವಿಗಳಾಗಿದ್ದರು. ಅಲ್ಲಮಪ್ರಭುಗಳು ಸಿದ್ಧರಾಮರೊಂದಿಗೆ ಮಹಾ ಮನೆಗೆ ಬಂದಾಗ ಅವರನ್ನು ಗುರುತಿಸುವಂತಹ ಸಾಮರ್ಥ್ಯ ಅವರದ್ದು. ಪೂಜೆಯಲ್ಲಿ ನಿರತರಾದ ಬಸವಣ್ಣವರಿಗೆ ಅವರು ಅಲ್ಲಮಪ್ರಭುಗಳ ಬಗ್ಗೆ ಹೇಳುವ ಈ ಕೆಳಗಿನ ವಚಗಳು  ಅವರ ಅನುಭಾವದ ಔನ್ನತ್ಯದ ಪರಿಚಯ ಕೊಡುತ್ತವೆ. 





ಅಂಬಿಗರ ಚೌಡಯ್ಯ





ಅಂಬಿಗರ ಚೌಡಯ್ಯನವರ ಬಗ್ಗೆ ಏನೂ ತಿಳಿದುಬರುವುದಿಲ್ಲ. ಅವರ ಬಗ್ಗೆ ಹರಿಹರ ಅಥವಾ ಇತರ ಕವಿಗಳು ಏನೂ ಬರೆದಿಲ್ಲ. ಅವರ ೨೭೮ ವಚನಗಳು ಲಭ್ಯವಿವೆ. ಅವರ ವಚನಗಳಿಂದಲೇ ಅವರ ವ್ಯಕ್ತಿತ್ವವನ್ನು ಅರಿಯಬೇಕು. ಅವರದು ನೇರ ಮತ್ತು ನಿಷ್ಠುರವಾದ ಮಾತು. ಇತರರ ತಪ್ಪುಗಳನ್ನು ಯಾವ ಭಿಡೆಯಿಲ್ಲದೆ ಎತ್ತಿ ತೋರಿಸುವವರು. ತಾನು ಹೇಳುವುದು ಬೇರೆಯವರಿಗೆ ಇಷ್ಟವಾಗುವುದೋ ಇಲ್ಲವೋ ಎಂಬ ವಿಷಯದ ಚಿಂತೆ ಅವರಿಗೆ ಇಲ್ಲ. ಹೇಳುವುದನ್ನು ಮೃದುವಾಗಿ ಹೇಳಿದರೆ ಜನರ ಮನಸ್ಸಿಗೆ ನಾಟುವುದಿಲ್ಲ ಆದ್ದರಿಂದ ಅದನ್ನು ಮೊನಚಾಗಿ ಹೇಳುವುದೇ ಸರಿ ಎಂಬಂತಿದೆ ಅವರ ಧೋರಣೆ. ಈ ರೀತಿಯ ಅವರ ಮಾತುಗಳನ್ನು ನೋಡಿದರೆ ಸಮಾಜದ ಬಗ್ಗೆ ಅವರಿಗೆ ಕಾಳಜಿ ಇರುವಂತೆ ತೋರುತ್ತದೆ. ತಮ್ಮ ನಡೆಯನ್ನು ನೇರವಾಗಿಟ್ಟುಕೊಂಡ ಅವರಿಗೆ ಯಾರ ಹಂಗು ಇಲ್ಲ. ರೂಢಮೂಲ ನಂಬಿಕೆ ಮತ್ತು ಸಂಪ್ರದಾಯದ ಕಟ್ಟಳೆಗಳನ್ನು ಕಂಡು ಅವರು ಸಿಡಿದೇಳುತ್ತಾರೆ. ಅವರ ವಚನಗಳಲ್ಲಿ ಅನುಭಾವ ಮತ್ತು ಜ್ಞಾನ ದಾಹ ಕಂಡು ಬರುತ್ತವೆ.
“ಚಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೊಯ್ದಿಳುಹುವೆ” ಎಂದು ಎದೆತಟ್ಟಿ ಹೇಳುತ್ತಾರೆ. ದೇವರ ನೆನೆಯದೆ ಬದುಕನ್ನಿ ಹಾಳುಗೆಡಹಿ ಚೆಂದಗೆಟ್ಟವರನ್ನು ತನ್ನ ದೋಣಿಯನ್ನು ಹತ್ತಲು ಕರೆಯುತ್ತಾರೆ. ಅವರನ್ನು ಶಿವಪಥಕ್ಕೆ ಹಚ್ಚುವ ದೃಢತೆ ಅವರಲ್ಲಿದೆ.
ಬಸವಣ್ಣನವರ ಸಮಕಾಲೀನರಾದ ಇವರು ಉತ್ತಮ ವಚನಕಾರರು. ವಚನಕಾರರು ತಮ್ಮ ಇಷ್ಟದೈವ ಅಥವಾ ಗುರುವಿನ ಹೆಸರನ್ನು ಅಂಕಿತವನ್ನಾಗಿಟ್ಟುಕೊಳ್ಳುವುದು ವಾಡಿಕೆ. ಆದರೆ ಇವರು ತಮ್ಮ ಕಾಯಕ ಮತ್ತು ತಮ್ಮ ಹೆಸರನ್ನೇ ಅಂಕಿತವನ್ನಾಗಿ ಮಾಡಿಕೊಂಡಿದ್ದಾರೆ.




ಸ್ವತಂತ್ರ ಸಿದ್ಧಲಿಂಗ



ಸ್ವತಂತ್ರ ಸಿದ್ಧಲಿಂಗರ ಬಗ್ಗೆ ಹೆಚ್ಚಿಗೆ ತಿಳಿದುಬರುವುದಿಲ್ಲ. ಅವರು ಶ್ರೀ ತೋಂಟದ ಸಿದ್ಧಲಿಂಗೇಶ್ವರರ ಶಿಷ್ಯರಾಗಿದ್ದರು ಎಂದು ತಿಳಿಯುತ್ತದೆ. ಇವರ ವಚನಾಂಕಿತ “ಸ್ವತಂತ್ರ ಸಿದ್ಧಲಿಂಗೇಶ್ವರ ಎಂದು. ಇವರು ೧೫ ನೇ ಶತಕದ ಉತ್ತರಾರ್ಧ ಅಥವಾ ೧೬ನೇ ಶತಕದ ಆದಿಯಲ್ಲಿ ಇದ್ದಿರಬಹುದೆಂದು ಹೇಳುತ್ತಾರೆ. ಇವರು ೭೦೦ ವಚನಗಳನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಇವರ ೪೩೫ ವಚನಗಳು ದೊರೆತಿವೆ. ಇವರು ತಮ್ಮ ಗುರುಗಳಬಗೆಗಾಗಲಿ ಅಥವಾ ತಮ್ಮ ಕಾಲದ ಬಗೆಗಾಗಲಿ ಎಲ್ಲಿಯೂ ಉಲ್ಲೇಖಿಸಿಲ್ಲ.


ಸಿದ್ಧಲಿಂಗ ಯತಿಗಳು ಹರದನ ಹಳ್ಳಿ ಸೀಮೆಯಲ್ಲಿ ಜನಿಸದಂತೆ ಕಂಡು ಬರುತ್ತದೆ. ಇವರು ಗೋಸಲ ಚೆನ್ನ್ನಬಸವ ಸ್ವಾಮಿಗಳ ಶಿಷ್ಯರಾಗಿದ್ದರು. ಇವರು “ಷಟಸ್ಥಲ ಬ್ರಹ್ಮಿ”ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ೭೦೧ ವಚನಗಳನ್ನು ಷಟ್ಸ್ಥಲ ವಿಭಾಗ ಕ್ರಮದಲ್ಲಿ ರಚಿಸಿದ್ದಾರೆ. ಇವರ ವಚನಗಳು ಸತ್ವಯುತವಾಗಿವೆ. ಅಲ್ಲದೆ ಬೆಡಗಿನ ವಚನಗಳನ್ನೂ ರಚಿಸಿದ್ದಾರೆ. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” ಎಂದು ಕರೆದಿದ್ದಾರೆ.
“ತೋಂಟದ ಅಲ್ಲಮರು” ಎಂಬುದಕ್ಕೆ ಕಾರಣವಿದೆ. ೧೨ ನೇ ಶತಮಾನದಲ್ಲಿ ಹುಟ್ಟಿದ್ದ ಅನುಭವ ಮಂಟಪ ಅಲ್ಲಮರು ಹೊರಟುಹೋದನಂತರ ಅನುಭವ ಮಂಟಪ ಶೂನ್ಯವಾಯಿತು. ಯಾರೂ ಆ ಸ್ಥಾನವನ್ನು ತುಂಬಲಿಲ್ಲ. (ಇದರ ವಿವರವನ್ನು ತಿಳಿಯಬಯಸುವವರು ಡಾ. ಎಮ್. ಎಮ್. ಕಲಬುರ್ಗಿಯವರ “ಮಾರ್ಗ” ಭಾಗ ೪ ರ “ಅನುಭವ ಮಂಟಪದ ಹುಟ್ಟು ಮರುಹುಟ್ಟು” ಎಂಬ ಲೇಖನವನ್ನು ಓದಬಹುದು.
ಅವರು ಹೇಳುತ್ತಾರೆ:
“.....ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆಯಲೆ ಇಲ್ಲ. ಇಂತಹ ಸಂದರ್ಭದಲ್ಲಿ ಹದಿನಾರನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗ ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪೀಠವೇರಿದ. ಇವನನ್ನು “ತೋಂಟದ ಅಲ್ಲಮ” “ದ್ವಿತಿಯ ಅಲ್ಲಮ”ನೆಂದು ತರುವಾಯದವರು ಕರೆದದ್ದು. ಅಲ್ಲಮನ ಬಳಿಕ ದ್ವಿತಿಯ ವ್ಯಕ್ತಿಯಾಗಿ ಪೀಠವೇರಿದನೆಂಬುದಕ್ಕೆ ಆಧಾರವಾಗಿ ನಿಲ್ಲುತ್ತದೆ.
““ಸಿದ್ಧಲಿಂಗ ಸಾಂಗತ್ಯ” ಬರೆದ ಹೇರಂಬಕವಿಯು ಇವನು ಹರದನ ಹಳ್ಳಿಯ ಹರದನ ಮಗನೆಂದುಹೇಳಿದ್ದಾನೆ. ಇತ್ತೀಚೆಗೆ ಲಭ್ಯವಾದ ಷಟ್ಸ್ಥಲ ಶಿವಾಯಣ ಕೃತಿಯಲ್ಲಿ ಈತನ ತಂದೆ ತಾಯಿಗಳು ಮಲ್ಲಿಕಾರ್ಜುನ ಶೆಟ್ಟಿ, ಜ್ಞಾನಾಂಬೆ ಎಂದು ಹೇಳಲಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವೈಶ್ಯ, ಶೂದ್ರರು ಶ್ರಮಿಕ ವರ್ಗ, ಬ್ರಾಹ್ಮಣ ಕ್ಷತ್ರಿಯರು ಪೋಷಕ ವರ್ಗ. ಬಸವಣ್ಣ ಈ ಶ್ರಮಿಕ ವರ್ಗವನ್ನು ಬೆಂಬಲವಾಗಿಟ್ಟುಕೊಂಡು ಆ ಪೋಷಕ ವರ್ಗದ ವಿರುದ್ಧ ಹೋರಾಡಿದ. ಹೀಗಾಗಿ ಆ ಕಾಲದಿಂದಲೂ ಬಸವ ಸಿದ್ಧಾಂತದ ಅಂದರೆ ಅನುಭವ ಮಂಟಪ ಸಂಸ್ಕೃತಿಯ ನಿಷ್ಠಾವಂತ ಅನುಯಾಯಿಗಳಾಗಿದ್ದ ವರ್ತಕ ಸಮಾಜದ ತೋಂಟದಾರ್ಯರ ಆ ಸಂಸ್ಕೃತಿಯನ್ನು ಮರುಸ್ಥಾಪಿಸಲು ಮುಂದೆ ಬಂದರೆಂಬುವುದು ಶರಣರ ಪರಂಪರೆಯ ದ್ವಿತಿಯ ಘಟಕದ ನಾಯಕ ವ್ಯಕ್ತಿಗಳಾದರೆಂಬುವುದು ಅವಶ್ಯ ಗಮನಿಸಬೇಕಾದ ಸಂಗತಿಯಾಗಿದೆ. ಹೀಗೆ ನಾಯಕ ವ್ಯಕ್ತಿಯಾಗಿ ಈತನು ಅನುಭವ ಮಂಟಪವನ್ನು ಮೂರು ಬಗೆಗಳಲ್ಲಿ ಪುನರುಜ್ಜೀವನಗೊಳಿಸಿದನು.

೧. ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಗೋಷ್ಠಿ ಗೊಗ್ಗಯ್ಯನ ಹೊಲದಲ್ಲಿ, ಮುಕ್ತಾಯಕನ ಮನೆಯಲ್ಲಿ, ಸೊಲ್ಲಾಪುರದ ಕೆರೆಯ ತೀರದಲ್ಲಿ, ಜರುಗಿದ ಸಾಧ್ಯತೆ ಇದ್ದರೂ ಅದರ ಬಹು ಪಾಲು ಕೇದ್ರೀಕೃತಗೊಂಡದ್ದು ಕಲ್ಯಾಣಮಂಟಪದಲ್ಲಿ. ಬಹುಶಃ ಕಲ್ಯಾಣದ ಬೀದಿಯಲ್ಲಿ, ನುಲಿಯ್ಯ ಚಂದಯ್ಯನ ಹುಲ್ಲುಗೊಯ್ಯುವ ಹೊಲದಲ್ಲಿ, ಮಡಿವಾಳ ಮಾಚಿದೇವ ಬಟ್ಟೆ
ತೊಳೆಯುವ ಕೆರೆಯ ತೀರದಲ್ಲಿ ಆಯ್ದಕ್ಕಿ ಮಾರಯ್ಯನ ಮನೆಯಲ್ಲಿ ಹೀಗೆ ಕಲ್ಯಾಣದ ಪರಿಸರದಲ್ಲಿ ಗೋಷ್ಠಿಗಳು ನದೆದಿದ್ದಿರಬಹುದಾದರೂ ಬಸವಣ್ಣನ ಮಹಾಮನೆಯಲ್ಲಿ ಜರುಗಿದುದೇ ಹೆಚ್ಚು. ಹೀಗೆ ಕಲ್ಯಾಣಕ್ಕೆ ಸೀಮಿತವಾಗಿದ್ದ ಅನುಭವ ಮಂಟಪವನ್ನು ತೋಂಟದಾರ್ಯರು ತಾವು ಚರಿಸಿದ ಬೇರೆ ಬೆರೆ ಗ್ರಾಮ ಪಟ್ಟಣಗಳಿಗೂ ಚರಿಸುವಂತೆ ಮಾಡಿದರು. ಮಹಾಬಳೇಶ್ವರ, ಕಂಗೆರೆ, ಚಿತ್ರಕಾಯಪುರ, ಹೆಬ್ಬೂರು, ತುಮಕೂರು, ದೇವರಾಯ ಪಟ್ಟಣ, ಹೊಳಲುಗುಂದ, ಎಡೆಯೂರು...................... ಈ ಗ್ರಾಮಗಳಲ್ಲಿ ಅನುಭವ ಮಂಟಪದ ಸಂಕಥನ ಜರಗುವಂತೆ ಮಾಡಿದರು.

೨. ಹೀಗೆ ತಾವೊಬ್ಬರೆ ಅನುಭವ ಮಂಟಪದ ವ್ಯಕ್ತಿರೂಪವಾಗಿ, ಪರ್ಯಟನ ಪೂರೈಸದೆ ಏಳುನೂರು ಜನ ವಿರಕ್ತರನ್ನು ಸಿದ್ಧ ಪಡಿಸಿ ಇವರೆಲ್ಲ ಅನುಭವ ಮಂಟಪವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಿದರು. ಬಹುಶಃ ಹನ್ನೆರಡನೆ ಶತಮಾನದಲ್ಲಿ ಅಲ್ಲಮ ಪ್ರಭುಮಾತ್ರ ವಿರಕ್ತನಾಗಿದ್ದನು. ಈಗ ಅನುಭವ ಮಂಟಪ ಸಂದೇಶವನ್ನು ದಿಕ್ಕು ದಿಕ್ಕಿಗೂ ಮುಟ್ಟಿಸಲು ಏಳುನೂರು ಜನರ ವಿರಕ್ತ ಪಡೆಯನ್ನು ತೋಂಟದಾರ್ಯರು, ಪರಿಣಾಮಕಾರಿಯಾಗಿ ಬಳಸಿದರು. ಇವರಲ್ಲಿ , ಸಪ್ಪೇದೇವರು, ಬೋಳ ಬಸವರಾಜ ದೇವರು, ಉಪ್ಪಿನ ಹಳ್ಳಿ ಸ್ವಾಮಿಗಳು, ಗುಮ್ಮಳಾಪುರ ಸಿದ್ಧಲಿಂಗ, ಪಟ್ಟಣದ ದೇವರು, ಶೀಲವಂತ ದೇವರು, ಘನಲಿಂಗಿ, ಸುತ್ತೂರು ಸಿದ್ಧಮಲ್ಲೇಶ, ಬತ್ತಲೆಯ ದೇಶಿಕ, ಹುಚ್ಚ ಪರ್ವತೇಶ , ಕಂಕಣದ ದೇವರು, ರಾಚವೀಟಿಯ ದೇವರು, ಗುರು ಚಂದ್ರಶೇಖರ, ದೊಡ್ಡ ಸಿದ್ಧೇಶ, ಸಿದ್ಧಲಿಂಗೇಶ್ವರ, ಮಳೆಯ ದೇವ, ಕೊಡಗಿನಹಳ್ಳಿಯಾರ್ಯ............... ಇವರೆ ಮೊದಲಾದ ಏಳನೂರು ಜನರಿಂದಾಗಿ ಸಂಚಾರಿ ಅನುಭವ ಮಂಟಪ ಅರ್ಥ ಪಡೆಯಿತು.
ಈ ಸಮಕಾಲೀನರನ್ನು ಬಿಟ್ಟರೂ ಇವರ ಶಿಷ್ಯ ಪ್ರಶಿಷ್ಯ ಪರಂಪರೆಯವರೂ ಅನುಭವ ಮಂಟಪ ಸಂಸ್ಕೃತಿಯನ್ನು ಇತಿಹಾಸದುದ್ದಕ್ಕೂ ಹಳ್ಳಿ ಹಳ್ಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಇವರಲ್ಲಿ ತೋಂಟದಾರ್ಯರ ಪರಂಪರೆಯವರಂತೂ ತಮ್ಮ ಕರ್ತವ್ಯವೆಂಬಂತೆ ಈ ಹೊಣೆಯನ್ನು ಶತಮಾನದಿಂದ ಶತಮಾನಕ್ಕೆ ಮುನ್ನಡೆಸಿದರು................ ಇವರಲ್ಲಿ ಕಟ್ಟಿಗೆಹಳ್ಳಿ ಸಿದ್ಧಲಿಂಗರು ಸಂಸಾರವನ್ನು ಬಿಟ್ಟು ಹರಪನಹಳ್ಳಿಯಲ್ಲಿ ನಿಂತು ಚೀಲಾಳಪ್ರಭುವನ್ನು ಉತ್ತರಾಧಿಕಾರಿ ಮಾಡಿಕೊಳ್ಳಲು ಅವರ ಶಿಷ್ಯರಲ್ಲಿ ಕೆಲವರು ಸಿಟ್ಟಿಗೆದ್ದು ಬೇರೆ ಸಮಯವ ಮಾಡಿಕೊಂಡರು, ಎಂಬ ವಿಷಯ ಈ ಕೃತಿಯಲ್ಲಿ ಬರುತ್ತದೆ. ಅದೇನೇ ಇದ್ದರೂ ಈ ಚೀಲಾಳಸ್ವಾಮಿ ಹರಪನ ಹಳ್ಳಿಯ ಗುಡ್ಡದ ಓರೆಯಲ್ಲಿ ಮಠ ಕಟ್ಟಿಸಿ ಅನುಭವ ಮಂಟಪ ಸ್ಥಾಪಿಸಿದ ವಿಷಯ ದಾಖಲಾಗಿದೆ............... ಇದರಿಂದಾಗಿ ತೋಂಟದಾರ್ಯರು ಮತ್ತೆ ಆರಂಭಿಸಿದ ಅನುಭವ ಮಂಟಪ ಸಂಚಾರವನ್ನು ಬಿಟ್ಟು ಸ್ಥಗಿತಗೊಂಡಿತು......... ಹದಿನಾರನೆಯ ಶತಮಾನದಲ್ಲಿ ಅನುಭವ ಮಂಟಪಕ್ಕೆ ಚಲನಶೀಲತೆ ನೀಡಿದುದು. ಅದು ವ್ಯಾಪಕವಾಗಿ ಹರಡಲು ಕಾರಣವಾದುದು ತೋಂಟದಾರ್ಯರ ದೊಡ್ದ ಸಾಧನೆಯಾಗಿದೆ.
೩. ಈ ಅನುಭವ ಮಂಟಪವನ್ನು “ಶೂನ್ಯಸಂಪಾದನೆ” ಹೆಸರಿನಲ್ಲಿ ಗ್ರಂಥಸ್ಥ ಗೊಳಿಸಲು ಶಿಷ್ಯರಿಗೆ ಪ್ರೇರಣೆ ನೀಡಿದುದು,................ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಮೂರನ್ನು ರೂಪಿಸಿದವರು ತೋಂಟದಾರ್ಯರ ಶಿಷ್ಯ ಪರಂಪರೆಯ “ ಹಲಗೆದೇವ (?) ಗುಮ್ಮಳಾಪುರ ಸಿದ್ಧಲಿಂಗ, ಗೂಳೂರು ಸಿದ್ಧವೀರಣ್ಣ. ಮೇಲೆ ಹೇಳಿದಂತೆ ಅನುಭವ ಮಂಟಪ ಸಂಸ್ಕೃತಿಯನ್ನು ತನ್ನ ಪರಂಪರೆಯ ವಿರಕ್ತ ವ್ಯಕ್ತಿಗಳಿಗೆ ಬದಲು ಗ್ರಂಥಗಳ ಮೂಲಕ ಪ್ರಸಾರಮಾಡಿಸಿದ್ದ ವಿನೂತನ ಉಪಕ್ರಮವಿದು. ............

ಒಟ್ಟಾರೆ ತೋಂಟದ ಸಿದ್ಧಲಿಂಗ ಶಿವಯೋಗಿಯ ಜನನದ ಉದ್ದೇಶ ಅನುಭವ ಮಂಟಪವನ್ನು ಪುನರುಜ್ಜೀವನಗೊಳಸುವುದು
ಮತ್ತು ಅದನ್ನು ವ್ಯಕ್ತಿ ಮಾಧ್ಯಮ, ಗ್ರಂಥ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೇ ಆಗಿದೆ.” 





ದೇವರ ದಾಸಿಮಯ್ಯ



 ದೇವರ ದಾಸಿಮಯ್ಯ ೯೮೦ ರಿಂದ ೧೦೪೦ರಲ್ಲಿ ಬಾಳಿದ ಶರಣರು. ಇವರು ಗುಲಬರ್ಗಾ ಜಿಲ್ಲೆಯ ಮುದನೂರು ಎಂಬ ಊರಿನವರು. ದೇವಾಂಗ ಕುಲದಲ್ಲಿ ಹುಟ್ಟಿದವರು. ಇವರು ತಮ್ಮ ಪ್ರಾರಂಭದ ವಿದ್ಯಾಭ್ಯಾಸ ಅಲ್ಲಿಯೇ ಪಡೆದರು. ಜೊತೆಗೆ ತಮ್ಮ ವಂಶದ ಕಸುಬಾದ ನೇಯ್ಗೆಯನ್ನೂ ಅಲಿತರು.ತಮ್ಮ ಮನೆ ದೇವರಾದ ರಾಮನಾಥನನ್ನು ನಿತ್ಯವೂ ಪೂಜಿಸಿತ್ತಿದ್ದರು.ಮನದಲ್ಲಿ ಅಧ್ಯಾತ್ಮಿಕ ಜಿಜ್ಞಾಸೆ ಬೆಳೆಯುತ್ತಿತ್ತು. ತಮ್ಮ ಸುತ್ತಲಿನ ಸಮಾಜವನ್ನು ತೆರೆದ ಕಣ್ಣ್ಣಿನಿಂದ ನೋಡುತ್ತಿದ್ದರು. ಜಾತಿಗಳ ಮೇಲು ಕೀಳುಗಳು ಅವರ ಮನಸ್ಸಿಗೆ ನೋವುಂಟು ಮಾಡುತ್ತಿದ್ದವು. ಗುರುವನ್ನು ಅರಸುತ್ತ ಶ್ರೀಶಿಲಕ್ಕೆ ಹೋದರು. ಅಲ್ಲಿ ಅವರು ಚಂದ್ರಗುಂಡ ಶಿವಾಚಾರ್ಯರ ಶಿಷ್ಯರಾಗಿ ಶಿವಯೋಗದ ಸಾಧನೆಯಲ್ಲ್ಲಿ ತೊಡಗಿದರು. ಆನಂತರ ಅವರು ಅಲ್ಲಿಂದ ಹಿತಿರುಗಿ ಹೊರಟರು. ಈಗ ಅವರು ಬೇರೆಯೇ ವ್ಯಕ್ತಿಯಾಗಿದ್ದರು. ಪೊಟ್ಟಲ್ಕೆರೆಯ ರಾಜನಾದ ಜಯಸಿಂಹನ ಪತ್ನಿ ಸುಗ್ಗಳೆ ಇವರ ಉಪದೇಶಕ್ಕೆ ಮಾರುಹೋಗಿ ಇವರ ಶಿಷ್ಯೆಯಾಗುತಾಳೆ. ರಾಜಾಸ್ಥಾನದಲ್ಲಿ ಜೈನ, ಬೌದ್ಧ ಮತ್ತು ಹಿಂದೂ ಧರ್ಮದ ಇತರ ಶಾಖೆಗಳವರನ್ನು ವಾದದಲ್ಲಿ ಸೋಲಿಸಿದರು. ಇವರ ಅನುಭಾವದ ಪ್ರಭಾವಕ್ಕೆ ಎಲ್ಲರೂ ಒಳಗಾದರು. ಅಲ್ಲಿಂದ ಇವರು ಮುದನೂರಿಗೆ ಹೋದರು. ದುಗ್ಗಳೆ ಎಂಬ ಕನ್ಯೆಯನ್ನು ಮದುವೆಯಾಗಿ ಗೃಹಸ್ಥರಾದರು. ನೇಯ್ಗೆಯನ್ನು ಕಾಯಕವಾಗಿ ಕೈಗೊಂಡರು. ಕಾಯಕದಿಂದ ಬಂದ ಹಣವನ್ನು ದಾಸೋಹಕ್ಕೆ ವಿನಿಯೋಗಿಸಿದರು. ಇವರ ಬಗ್ಗೆ ಒಂದು ಕತೆ ಪ್ರಸಿದ್ಧವಾಗಿದೆ.
ಒಮ್ಮೆ ಇವರು ಒಂದು ಚೆಲುವಾದ ಎಲ್ಲರ ಮನ ಸೆಳೆಯುವ ವಸ್ತ್ರವನ್ನು ನೇಯ್ದರು. ಅದನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಲು ನಿಂತರು. ಆದರೆ ಜನರು ಅದರ ನಯ ಮತ್ತು ಆಕರ್ಷಣೆಯನ್ನು  ನೋಡಿ ಅದರ ಬೆಲೆ ಬಹಳವಾಗಿರಬೇಕೆಂದು ತಿಳಿದು ಅದನ್ನು ಕೊಳ್ಳಲು ಮುಂದೆ ಬರಲಿಲ್ಲ. ಅದು ಹಾಗೆಯೇ ಉಳಿಯಿತು. ಅವರು ಅದನ್ನು ತೆಗೆದುಕೊಂಡು ಮನೆಗೆ ಹಿಂದಿರುಗುತ್ತಿದ್ದರು. ದಾರಿಯಲ್ಲಿ ಶಿವನು ಒಬ್ಬ ಮುದುಕ ಜಂಗಮದ ರೂಪದಲ್ಲಿ ಬರುತ್ತಿದ್ದನು. ಆತನ ಮೈಮೇಲೆ ಹರಕು ಬಟ್ಟೆಯಿದ್ದಿತು. ಆತನು ಚಳಿಯಿಂದ ನಡುಗುತ್ತಿದ್ದನು.  ದಾಸಿಮಯ್ಯನ ಕೈಯಲ್ಲಿದ್ದ ವಸ್ತ್ರವನ್ನು ನೋಡಿ ಅದನ್ನು ಕೇಳಿದನು. ದಾಸಿಮಯ್ಯ ತಕ್ಷಣ ಅದನ್ನು ಅವನಿಗೆ ನೀಡಿದನು. ಜಂಗಮನು ಅದನ್ನು ತೆಗೆದುಕೊಂಡು  ಪರಪರನೆ ಹರಿದು ನಡೆದು ನೋವಾದ ಕಾಲಿಗೆ ಅಲ್ಲದೆ  ತಲೆಗೆ ಕಟ್ಟಿಕೊಂಡನು.ತನ್ನ ಅಪೂರ್ವವಾದ ವಸ್ತ್ರಕ್ಕೆ ಆದ ಗತಿ ದಾಸಿಮಯ್ಯ ನೋಡಿದನು. ಆದರೆ ಬೇಸರ ಪಟ್ಟುಕೊಳ್ಳಲಿಲ್ಲ. ಶಿವನ ಸ್ವತ್ತು ಶಿವನಿಗೆ ಅರ್ಪಿತವಾಯಿತು ಎಂದು ತಿಳಿದನು. ಆ ಜಂಗನನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋಗಿ ಸತಿ ಪತಿಗಳು ಭಕ್ತಿಯಿಂದ ಉಪಚರಿಸಿದರು. ಅವರ ಭಕ್ತಿಗೆ ಮೆಚ್ಚಿ ಶಿವನು ಒಂದು ಹಿಡಿ ಧಾನ್ಯವನ್ನು ಕೊಟ್ಟು ತಮ್ಮ ಧಾನ್ಯ ಧಾನ್ಯ ಸಂಗ್ರಹದಲ್ಲಿ ಹಾಕಲು ಹೇಳಿದನು ಅಂದಿನಿಂದ  ಅವರ ಧಾನ್ಯ ಸಂಗ್ರಹ ಅಕ್ಷಯವಾಯಿತು. ಇದರಿಂದ ದಾಸಿಮಯ್ಯನವರ  ಮನದ  ಮಲೆ ತನಗೆ ತವನಿಧಿ ದೊರಕಿದೆ ಎಂಬ  ಮರವೆ ಕವಿಯಿತು. ಆಗ ಶಂಕರ ದಾಸಿಮಯ್ಯನವರು ಬಂದು ಅದನ್ನು ದೂರ ಮಾಡಿದರು. ಇವರ ಈ ಕಥೆ ಅನೇಕ ಶರಣರ ವಚನಗಳಲ್ಲಿ ಉದಾಹರಣೆಯಾಗಿ ಬಂದಿದೆ. 
ದಾಸಿಮಯ್ಯನವರು ತಮ್ಮ ಅನುಭಾವವನ್ನು  ವಚನಗಳಲ್ಲಿ ವ್ಯಕ್ತಪಡಸಿದ್ದಾರೆ. ಹಿಂದೆ ಸಂಸೃತಕ್ಕೆ ಮಾನ್ಯತೆಯಿದ್ದ ಸಮಯದಲ್ಲಿ ಕನ್ನಡದಲ್ಲಿ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಚನಗಳಲ್ಲಿ ಅಭಿವ್ಯಕ್ತಿಸಿದರು. ಇವರು ಇನ್ನೂ ಬೆರೆ ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಯುತ್ತದೆ. ಆದರೆ ಇವರ ನೂರೈವತ್ತು ವಚಗಳು ಮಾತ್ರ ದೊರಕಿವೆ. ಇವರ ವಚನಗಳುಪ್ರೌಢಿಮೆಯಿಂದ ಕೂಡಿವೆ. ಇವರ ಹಿಂದೆಯೂ ವಚನಗಳ ರಚನೆಯಾಗಿತ್ತೆಂದು ತಿಳಿದು ಬರುತ್ತದೆ. ಇವರ ವಚನಗಳು ಪ್ರಾಸಗಳಿಂದ ಕೂಡಿ  ಸರಳ ಮತ್ತು ಸಂಕ್ಷಿಪ್ತವಾಗಿವೆ. 




ತುರುಗಾಹಿ ರಾಮಣ್ಣ:


ಆತನ ಹೆಸರಿನ ಮೊದಲ ಪದವೇ ಹೇಳುವಂತೆ ರಾಮಣ್ಣ ತುರುಗಳನ್ನು ಕಾಯುವವನು. ಶರಣರ ಮನೆಯ ಗೋವುಗಳನ್ನು ಕಾಯುವ ಕಾಯಕ ಆತನದು. ಆ ಆದಾಯದಿಂದಲೇ ಜಂಗಮ ದಾಸೋಹ ನಡೆಸುವವನು. ಆತನು ಬಸವಣ್ಣನವರ ಸಮಕಾಲೀನನು. ಆತನ ಒಂದು ವಚನದಿಂದ ಕಲ್ಯಾಣದ ಕ್ರಾಂತಿಯ ಕೊನೆಯಲ್ಲಿ ಯಾರು ಯಾರು ಯಾವ ಯಾವ ಕಡೆಗೆ ಹೋದರು ಎಂಬುದು ತಿಳಿದು ಬರುತ್ತದೆ:



ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚೆನ್ನ ಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪಿನಾಥ ವಿಶ್ವೇಶ್ವರ ಲಿಂಗದಲ್ಲಿಯೆ ಉಡುಗುವೆನು
 

ಐತಿಹಾಸಿಕವಾಗಿ ಈ ವಚನ ಮೌಲಿಕವಾದದ್ದು. ಈತನ ವಚನಗಳಲ್ಲಿ ಗೋವುಗಳ ಬಣ್ಣಗಳು, ಅವುಗಳ ಗುಣಗಳು, ಅವುಗಳನ್ನು ಕಾಯುವ ರೀತಿ ಮುಂತಾದ ಗೋವುಗಳಿಗೆ ಸಂಬಂಧಪಟ್ಟ ನಾನಾ ವಿಷಯಗಳು ಉಲ್ಲೇಖಿಸಲ್ಪಟ್ಟಿವೆ. ಗೋವು ಕಾಯುವ ತನ್ನ ಕಾಯಕದಲ್ಲಿಯೇ ತನ್ನ ದೇವರನ್ನು ಕಂಡ ಅನುಭಾವಿ ಈತನು. ತನ್ನ ಕಾಯಕದ ಪರಿಭಾಷೆಯಲ್ಲಿಯೆ ಅಧ್ಯಾತ್ಮವನ್ನು ತಿಳಿಸಿ ಹೇಳುವುದು ಈತನ ರೀತಿ ಅದ್ಭುತವಾದದ್ದು.


 
ರಾಯಸದ ಮಂಚಣ್ಣನ  ಕಾಲ ಕ್ರಿಸ್ತ ಶಕ ೧೧೬೦. ಈತನ ವಚದ ಅಂಕಿತಜಾಂಬೇಶ್ವರ’ . ಈತನು ಬಸವಣ್ಣನವರ ಪತ್ರವ್ಯವಹಾರವನ್ನು ನೋಡಿಕೊಳ್ಳುತ್ತಿದ್ದನು. ಈತನ ಹತ್ತು ವಚನಗಳು ಲಭ್ಯವಾಗಿವೆ. ವಚನಗಳು ಸರಳವಾಗಿವೆ. ಇಷ್ಟಲಿಂಗದ ಮಹತ್ವ, ಅರಿವು, ಆಚಾರ, ಮನದ ವಿಕಾರ, ಇಂದ್ರಿಯ ನಿಗ್ರಹ ಇತ್ಯಾದಿ ಈತನ ವಚನಗಳ ವಿಷಯಗಳು.

Rayasada Manchanna lived around 1160 A.D. and said to be in charge of Basavanna’s correspondence. He  uses the signature ‘JaambeSvara’ in his Vachanas. Only ten of his Vachanas have been found. These simple Vachanas concentrate on the importance and knowledge of  Ishtalinga, behavior, distortions of mind, control of senses, etc.  



ಮೋಳಿಗೆಯ ಮಾರಯ್ಯನವರು ಕಾಶ್ಮೀರ ದೇಶದ ಅರಸರು. ಇವರ ಮೂಲ ಹೆಸರು ಮಹದೇವ ಭೂಪಾಲ ಮತ್ತು ಇವರ ಹೆಂಡತಿ ಗಂಗಾದೇವಿ. ತಮ್ಮ ಊರಿಗೆ ಬಂದ ಜಂಗಮರಿಂದ ಬಸವಣ್ಣನವರ ಮಹಿಮೆಯನ್ನು ಕೇಳಿ ತಿಳಿದು ರಾಜ್ಯವನ್ನು ತೊರೆದು ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಕಾಡಿನಿಂದ ಕಟ್ಟಿಗೆಯನ್ನು ಕಡಿದು ತಂದು ಮಾರಯ್ಯ ಮತ್ತು ಮಹದೇವಿ ಎಂಬ ಹೆಸರಿನಲ್ಲಿ ಕಟ್ಟಿಗೆ ಮಾರುವ ಕಾಯಕ ಮಾಡುತ್ತ  ದಾಸೋಹದಲ್ಲಿ ನಿರತರಾಗುತ್ತಾರೆಇವರ ಕಾಲ ೧೧೬೦. ಇವರ ೮೦೮ ವಚನಗಳು ದೊರೆಕಿವೆ.

Sharana MolIgeya Marayya was king of Kashmir known as Mahadeva Bhoopala with his queen Gangadevi, around 1160 A.D.  Having heard about Basavanna and his work from the devotees , the King and the Queen give up their kingdom and travel to Kalyana to join Basavanna’s  team. They take up the profession of wood cutting and selling it while engaged in the Anubhava Mantapa.  About 808 Vachanas from Marayya and Mahadevi have been found.

1 comment: